ಹೊಸದಿಗಂತ ಡಿಜಿಟಲ್ ಡೆಸ್ಕ್ :
ದಾವಣೆಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಬಿಜೆಪಿ ಯನ್ನು ತರುವ ಶಪಥ ಮಾಡಿದ್ದಾರೆ.
ನನಗೆ 80 ವರ್ಷ ವಯಸ್ಸು. ಆದರೆ ವಿಶ್ರಾಂತಿ ಪಡೆಯಲ್ಲ. ನಾನು ಮನೆ ಮನೆಗೆ ತೆರಳಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡುತ್ತೇನೆ. ನನಗೆ ನಿಮ್ಮ ಸಹಕಾರ ಅಗತ್ಯವಿದೆ ಎಂದು ಕಾರ್ಯಕರ್ತರಿಗೆ ವಿಶೇಷ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲೇ ಯಡಿಯೂರಪ್ಪ, ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ನೀಡಿದ್ದಾರೆ.
ಹಿಂದೆ ಒಂದು ಕಾಲವಿತ್ತು, ಅಧಿಕಾರದ ಬಲ, ಹಣದ ಬಲ, ಹೆಂಡದ ಬಲದಿಂದ ಅಧಿಕಾರಕ್ಕೆ ಬರುವ ಕಾಲ. ಆದರೆ ಇಂದು ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿ ಆಡಳಿತವನ್ನು ಮೆಚ್ಚಿಕೊಂಡಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಆಡಳಿತ ಅಭಿವೃದ್ಧಿಯನ್ನು ತಲುಪಿಸಿ. ಈ ಮೂಲಕ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬರಲು ನೀವೆಲ್ಲ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದು ಕೇವಲ ವಿಜಯ ಸಂಕಲ್ಪ ಯಾತ್ರೆ ಮಾತ್ರವಲ್ಲ, ವಿಜಯದ ಯಾತ್ರೆ. ಕಾಂಗ್ರೆಸ್ ಈಗಾಗಲೇ ಸೋಲೊಪ್ಪಿಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ಗ್ಯಾರೆಂಟ್ ಕಾರ್ಡ್ ನೀಡುತ್ತಿದೆ. 70 ವರ್ಷ ಕಾಂಗ್ರೆಸ್ ಕಡುಬು ತಿಂತಾ ಇದ್ದೀರಾ. ಸುಳ್ಳು ಭರವಸೆಯನ್ನು ನೀಡಿ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ಯಡಿಯೂರಪ್ಪ ಹೇಳಿದರು.
ದಾವಗಣೆರೆ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕಾರ್ಯಕ್ರಮ ಇದಾಗಿದೆ. ಕರ್ನಾಟಕದ ರಾಜ್ಯದಲ್ಲಿ ಸ್ವಂತ ಶಕ್ತಿ ಮೇಲೆ ಅಧಿಕಾರ ರಚಿಸುತ್ತೇವೆ ಎಂದು ನಾನು ಮೋದಿಗೆ ಭರವಸೆ ನೀಡಬಹುದೇ? ಎಂದು ಬಿಎಸ್ ಯಡಿಯೂರಪ್ಪ ಸೇರಿದ್ದ ಜನತೆಯನ್ನು ಪ್ರಶ್ನಿಸಿದರು. ಇದೇ ವೇಳೆ ಜನರು ಕೈಎತ್ತಿ ಯಡಿಯೂರಪ್ಪ ಅವರಿಗೆ ಸ್ಪಂದಿಸಿದರು.