ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವುಗಳು ನಡೆಯುತ್ತಿವೆ. ಇದೀಗ ಕೋರ್ಟ್ ಮುಂದೆ ಶ್ರದ್ಧಾಳನ್ನು ತಾನೇ ಕೊಲೆ ಮಾಡಿರುವುದಾಗಿ ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ. ಮಂಪರು ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ. ಈ ಪ್ರಕರಣದಲ್ಲಿ ಅಫ್ತಾಬ್ಗೆ ವಿಧಿಸಲಾದ ಐದು ದಿನಗಳ ಪೊಲೀಸ್ ಕಸ್ಟಡಿಯನ್ನು ಪೂರ್ಣಗೊಳಿಸಿದ ನಂತರ, ವಿಚಾರಣೆಯ ಅವಧಿ ವಿಸ್ತರಿಸಲು ಪೊಲೀಸರು ಸಾಕೇತ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆರೋಪಿಯನ್ನು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ವೇಳೆ ʻಶ್ರದ್ಧಾಳನ್ನು ಕೊಂದಿದ್ದು ನಾನೇʼ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಆದರೆ, ಉದ್ದೇಶಪೂರ್ವಕವಾಗಿ ನಾನು ಶ್ರದ್ಧಾಳನ್ನು ಹತ್ಯೆ ಮಾಡಿಲ್ಲ. ಕ್ಷಣಾರ್ಧದಲ್ಲಿ ಎಲ್ಲವೂ ನಡೆದುಹೋಗಿದೆ ಎಂದಿದ್ದಾನೆ. ಕೊಲೆಯಾಗಿ ತಿಂಗಳುಗಳೇ ಕಳೆದಿದ್ದರೂ ಆ ದಿನ ನಡೆದ ಘಟನೆಗಳು ತನಗೆ ಹೆಚ್ಚು ನೆನಪಿಲ್ಲ ಎಂದು ಆರೋಪಿ ಹೇಳಿದ್ದಾನೆ. ಪ್ರಕರಣದ ತನಿಖೆಗೆ ನಾನು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ನಾನು ಹೇಳುತ್ತಿರುವುದೆಲ್ಲವೂ ನಿಜ ಮತ್ತು ಶ್ರದ್ಧಾ ಅವರ ದೇಹದ ಭಾಗಗಳನ್ನು ಎಸೆದ ಸ್ಥಳಗಳ ಬಗ್ಗೆಯೂ ಪೊಲೀಸರಿಗೆ ತಿಳಿಸಿರುವುದಾಗಿ ಆರೋಪಿ ನ್ಯಾಯಾಲಯಕ್ಕೆ ಹೇಳಿದನು. ಈ ಮಾಹಿತಿ ಪಡೆದ ಬಳಿಕ ನ್ಯಾಯಾಲಯ ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದೆ.
ಈ ವೇಳೆ ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಮತ್ತೊಂದೆಡೆ ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಭರದಿಂದ ಸಾಗಿದೆ. ಶ್ರದ್ಧಾ ಅವರ ದೇಹದ ಭಾಗಗಳನ್ನು ಕತ್ತರಿಸಲು ಬಳಸಿದ ಮಾರಕಾಸ್ತ್ರವನ್ನು ಎಲ್ಲಿ ಬೀಳಿಸಿದ್ದೇನೆ ಎಂದು ಆರೋಪಿ ಹೇಳಿರುವುದಾಗಿ ದೆಹಲಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.