ಹೊಸ ದಿಗಂತ ವರದಿ, ಕಲಬುರಗಿ:
ನನ್ನ ರಾಜಕೀಯ ಜೀವನದಲ್ಲಿ 11 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಕಳೆದ ಬಾರಿ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇನೆಂಬ ಭರವಸೆ ಇತ್ತು.ಆದರೆ, ಸೋಲುತ್ತೇನೆಂಬ ನಿರೀಕ್ಷೆ ಇರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಚುನಾವಣೆ ಹೊತ್ತಿನಲ್ಲಿ ನಮ್ಮ ಮನೆಯಲ್ಲಿ ನಮ್ಮ ಹೆಂಡತಿ ಹೇಳಿದ್ದಳು. ಈ ಬಾರಿ ಗಾಳಿ ಸರಿಯಿಲ್ಲ. ಚುನಾವಣೆ ಮಾಡೋದು ಬೇಡಾ ಎಂದಿದ್ದಳು.ಆದರೆ, ಹೆಣ್ಣು ಮಕ್ಕಳ ಮಾತನ್ನು ಕೇಳೋದು ಬೇಡಾ ಎಂದು ಚುನಾವಣೆಗೆ ನಿಂತಬಿಟ್ಟೆ ಎಂದು ಹೇಳಿದರು.
2019ರ ಲೋಕಸಭಾ ಚುನಾವಣೆಯಲ್ಲಿ ನಾನು ಸೋತ ಬಳಿಕ ಸೋನಿಯಾ ಗಾಂಧಿ ಅವರು ನನಗೆ ಫೋನ್ ಮಾಡಿ, ನೀವು ಬೇಜಾರ ಆಗಬೇಡಿ. ನಿಮ್ಮ ಸೇವೆ ಜನತೆಗೆ ಬೇಕಾಗಿದೆ. ತಕ್ಷಣವೇ ರಾಜ್ಯ ಸಭೆಗೆ ನಾಮಿನೇಷನ್ ಹಾಕಿ ಎಂದು ಹೇಳಿದರು.ಇದೀಗ ನಿಮ್ಮ ಆಶೀರ್ವಾದ ಮೂಲಕ ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದರು.
ನನ್ನ ಸೋಲಾದರೂ ಸಹ ನಾನು ಯಾವತ್ತೂ ಗುರುಮಿಠಕಲ್ ಹಾಗೂ ಕಲಬುರಗಿ ಜನತೆಯನ್ನು ಮರೆಯುವುದಿಲ್ಲ.ಇದು ನನ್ನ ಮೂಲ ಭೂಮಿ.ಎಲ್ಲರೂ ಜೀವನದಲ್ಲಿ ಕಷ್ಟ ಪಟ್ಟು ಶ್ರಮ ಹಾಕಿ, ನೀವು ಶ್ರಮ ಹಾಕಿದಾಗ ಮಾತ್ರ ನಿಮಗೆ ಯಶಸ್ಸು ಸಿಗಲಿದೆ ಎಂದು ಹೇಳಿದರು.