ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ)ದಿಂದ ಅಮಾನತುಗೊಂಡ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಕೊನೆಗೂ ಮೌನ ಮುರಿದಿದ್ದಾರೆ.
ಸೋನಿಪತ್ನಲ್ಲಿ ಮಾರ್ಚ್ನಲ್ಲಿ ಆಯ್ಕೆ ಟ್ರಯಲ್ಸ್ ವೇಳೆ ಉದ್ದೀಪನ ಮದ್ದು ನಿಯಂತ್ರಣ ಘಟಕದ ಅಧಿಕಾರಿಗಳು, ಮಾದರಿ ಪಡೆಯಲು ತಂದಿದ್ದ ಪರೀಕ್ಷಾ ಕಿಟ್ಗಳು ಸಮರ್ಪಕವಾಗಿವೆ ಎಂಬ ಬಗ್ಗೆ ಅಗತ್ಯ ಸಾಕ್ಷ್ಯ ನೀಡಲು ವಿಫಲವಾದ ಕಾರಣ ಮೂತ್ರದ ಮಾದರಿ ನೀಡಲು ನಾನು ನಿರಾಕರಿಸಿದ್ದೆ’ ಎಂದು ಪೂನಿಯಾ ಹೇಳಿದ್ದಾರೆ.
ಮದ್ದು ಪರೀಕ್ಷೆ ಅಧಿಕಾರಿಗಳಿಗೆ ವಾಸ್ತವ್ಯದ ಮಾಹಿತಿ ನೀಡಲು ನಿರಾಕರಿಸಿದ ಕಾರಣಕ್ಕೆ ಏಪ್ರಿಲ್ 18ರಂದು ಬಜರಂಗ್ ಅವರಿಗೆ ನೋಟಿಸ್ ನೀಡಿದ್ದ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ), ಅಮಾನತು ಮಾಡಿತ್ತು.
ನಾಡಾ ನಿರ್ಧಾರ ಅನುಸರಿಸಿ, ವಿಶ್ವ ಕುಸ್ತಿ ಆಡಳಿತ ನೋಡಿಕೊಳ್ಳುವ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಗುರುವಾರ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಅವರು 65 ಕೆ.ಜಿ. ವಿಭಾಗದ ಸ್ಪರ್ಧಿಯಾಗಿದ್ದಾರೆ.
‘ಉದ್ದೀಪನ ಮದ್ದು ಪರೀಕ್ಷೆಗೆ ಯಾವುದೇ ಹಂತದಲ್ಲಿ ಸ್ಯಾಂಪಲ್ ನೀಡಲು ನಾನು ನಿರಾಕರಿಸಿಲ್ಲ ಎಂದು ಸ್ಪಷ್ಟಪಡಿಸುವೆ. ಹೋದ ಮಾರ್ಚ್ 10ರಂದು ಅಧಿಕಾರಿಗಳು ಮಾದರಿ ಸಂಗ್ರಹಿಸಲು ಬಂದಿದ್ದರು. ಈ ಹಿಂದೆ ಎರಡು ಬಾರಿ ಅವರು ನನ್ನ ಮಾದರಿ ಪಡೆಯಲು ಬಂದಾಗ ಅವರು ಅವಧಿ ಮುಗಿದ ಕಿಟ್ಗಳೊಡನೆ ಬಂದಿದ್ದನ್ನು ಜ್ಞಾಪಿಸಿದ್ದೆ’ ಎಂದು ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಮತ್ತೊಂದು ಸಂದರ್ಭದಲ್ಲಿ ಅವರು ಕಡ್ಡಾಯವಾಗಿ ತರಬೇಕಾದ ಮೂರು ಕಿಟ್ಗಳ ಬದಲು ಒಂದನ್ನಷ್ಟೇ ತಂದು ನನ್ನನ್ನು ಮಾದರಿಗಾಗಿ ಸಂಪರ್ಕಿಸಿದ್ದರು’ ಎಂದು ಬಜರಂಗ್ ಬರೆದಿದ್ದಾರೆ.
‘ನಾನು ಸ್ಥಳದಿಂದ ಬೇಗ ನಿರ್ಗಮಿಸಿದ್ದೆ ಎಂದು ವರದಿಯಾಗಿತ್ತು. ಆದರೆ ಅಧಿಕಾರಿಗಳು ತಮ್ಮ ಬಳಿ ಬಂದುಹೋದ ಬಳಿಕ ಒಂದು ಗಂಟೆ ನಾನು ಸ್ಥಳದಲ್ಲೇ ಇದ್ದೆ’ ಎಂದು ಅವರು ಹೇಳಿದ್ದಾರೆ. ಸೆಮಿಫೈನಲ್ನಲ್ಲಿ ಆಗ ಮೊಣಕಾಲಿನ ಗಾಯಕ್ಕೆ ಕ್ರೀಡಾ ಪ್ರಾಧಿಕಾರದ ವೈದ್ಯರನ್ನೂ ಭೇಟಿಯಾಗಿದ್ದೆ’ ಎಂದಿದ್ದಾರೆ.