ಹೊಸದಿಗಂತ ವರದಿ,ವಿಜಯಪುರ:
ಗುತ್ತಿಗೆದಾರ ಅಧ್ಯಕ್ಷ ಕೆಂಪಣ್ಣ ಬಂಧನದ ಬಗ್ಗೆ ಏನು ಹೇಳಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಮನುಷ್ಯ ಕಾಂಗ್ರೆಸ್ ನವರ ಮಾತು ಕೇಳಿ ಬಿಜೆಪಿ ಸರ್ಕಾರದ ಮೇಲೆ ಸುಮ್ಮನೆ ಆರೋಪ ಹೊರಿಸಿದ್ದಾನೆ. ಅದು ಸರಿಯಲ್ಲ ಎಂದರು.
ನೀವು ಯಾವ ಕೆಲಸ, ಯಾವ ಇಲಾಖೆ ಕೆಲಸ, ಎಷ್ಟು ಮೊತ್ತದ ಕೆಲಸ ಮಾಡಿದ್ದೀರಿ ಯಾರ್ಯಾರಿಗೆ ಎಷ್ಟೆಷ್ಟು ಲಂಚ ಕೊಟ್ಟಿದ್ದೀರಿ ಹೇಳಿ ಎಂದರೆ ಅವರಿಂದ ಹೇಳೋಕೆ ಆಗಲಿಲ್ಲ. ಸುಮ್ಮನೇ ಶೇ. 40 ತಗೊಳ್ತಾರೆ ಎಂದು ಹೇಳಿದ್ದಾರೆ. ಸುಳ್ಳು ಆರೋಪ ಮಾಡಿದ್ದು, ಸತ್ಯ ಆರೋಪ ಮಾಡಿದ್ದು ಯಾವುದು ಎಂಬುದು ಗೊತ್ತಾಗೇ ಆಗುತ್ತದೆ ಎಂದರು.
ಶೇ. 40 ಪರ್ಸೆಂಟ್ ಕೊಟ್ಟಿದಿನಿ ಎಂದು ಅವನು ಆರೋಪಿಸುತ್ತಾನೆ. ಶೇ. 20 ಪರ್ಸೆಂಟ್ ಮೇಲೆ ಟ್ಯಾಕ್ಸ್, ಜಿಎಸ್ಟಿ, ಆದಾಯ ತೆರಿಗೆ, ರಾಯಲ್ಟಿ, ಸೆಸ್ಸ್ ಗಳು ಸೇರಿ ಶೇ. 24 ಟ್ಯಾಕ್ಸ್ ಆಗುತ್ತೆ. ಇವರ ಪ್ರಕಾರ ಶೇ. 40 ಲಂಚ, 20 ಮೇಲೆ ಟ್ಯಾಕ್ಸ್ ಅಂದ್ರೆ ಶೇ. 60 ಆಯ್ತು. ಇನ್ನುಳಿದ ಶೇ. 40 ಪರ್ಸೆಂಟ್ ನಲ್ಲಿ ಕೆಲಸ ಮಾಡಲು ಸಾಧ್ಯವೇ ?, ಅದಕ್ಕೆ ಸುಳ್ಳು ಆರೋಪ ಮಾಡಬಾರದು ಎಂದರು.