ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರ ಮನೆಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ 2020ರಲ್ಲಿ ಕೆಡವಿದ್ದರು. ಇದಕ್ಕೆ ಸಂಬಂಧಿಸಿ ಅವರಿಗೆ ಪರಿಹಾರ ಹಣ ಸಿಗಬೇಕಿತ್ತು. ಆದರೆ, ಈವರೆಗೂ ಅವರಿಗೆ ಹಣ ಸಿಕ್ಕಿಲ್ಲ. ಈ ಬಗ್ಗೆ ಕಂಗನಾ ಅಸಮಾಧಾನ ಹೊರಹಾಕಿದ್ದಾರೆ.
ಅಕ್ರಮ ನಿರ್ಮಾಣ ಆರೋಪ ಹೊರಿಸಿ ಕಂಗನಾ ಅವರ ಮನೆಯ ಒಂದು ಭಾಗವನ್ನು 2020ರಲ್ಲಿ ಕೆಡವಲಾಯಿತು. ಈ ವಿಚಾರದಲ್ಲಿ ಶಿವಸೇನೆ ಹಾಗೂ ಕಂಗನಾ ಮಧ್ಯೆ ಕಿತ್ತಾಟ ನಡೆಯಿತು. ಕಂಗನಾ ವೈ+ ಕೆಟಗರಿ ಭದ್ರತೆ ನೀಡಲಾಯಿತು. ‘ಕಂಗನಾ ರಣಾವತ್ ಅವರು ತೆರಿಗೆದಾರರ ಹಣವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಭದ್ರತೆ ನೀಡಿದ ವಿಚಾರವನ್ನು ಅನೇಕರು ಟೀಕೆ ಮಾಡಿದ್ದರು. ಈಗ ಕಂಗನಾ ತಮಗೆ ಬರಬೇಕಿದ್ದ ಪರಿಹಾರ ಹಣವನ್ನು ನಿರಾಕರಿಸಿದ್ದಾರೆ.
ಇತ್ತೀಚೆಗೆ ಕಂಗನಾಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನನಗೆ ಪರಿಹಾರ ಹಣ ಸಿಕ್ಕಿಲ್ಲ. ನನಗೆ ಆದ ನಷ್ಟವನ್ನು ಅಳೆಯಲು ಮೌಲ್ಯಮಾಪಕರು ಬರಬೇಕಿತ್ತು. ಈಗ ನಾನು ಮಹಾರಾಷ್ಟ್ರ ಸಿಎಂ ಏಕ್ನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದೇನೆ. ಮೌಲ್ಯಮಾಪಕರನ್ನು ಕಳಿಸಬೇಡಿ. ನನಗೆ ಪರಿಹಾರ ಹಣ ಬೇಡ ಎಂದು ಹೇಳಿದ್ದೇನೆ’ ಎಂಬುದಾಗಿ ಅವರು ತಿಳಿಸಿದ್ದಾರೆ.
ನನಗೆ ಪರಿಹಾರ ನೀಡಬೇಕೆಂದು ನ್ಯಾಯಾಲಯ ಹೇಳಿದೆ. ಆದರೆ ಅವರು ಎಂದಿಗೂ ಮೌಲ್ಯಮಾಪಕರನ್ನು ಕಳುಹಿಸಲಿಲ್ಲ. ನಾನು ಆ ಬಗ್ಗೆ ಬೇಡಿಕೆಯನ್ನೂ ಇಟ್ಟಿಲ್ಲ. ಏಕೆಂದರೆ ಅದು (ಪರಿಹಾರದ ಹಣ) ತೆರಿಗೆ ಪಾವತಿದಾರರ ಹಣ ಮತ್ತು ನನಗೆ ಆ ಹಣ ಬೇಡ’ ಎಂದಿದ್ದಾರೆ.