ಹೊಸದಿಗಂತ ವರದಿ,ವಿಜಯಪುರ:
ನನಗೆ ಯಾವುದೇ ನೋಟಿಸ್ ಬಂದಿಲ್ಲ. ಸುಮ್ನೇ ಊಹಾಪೋಹ ಹರಡಿಸಲಾಗುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೋಟಿಸ್ ಕೊಡುವಂತಹ ಯಾವುದೇ ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ಭ್ರಷ್ಟರು ವಂಶಪಾರಂಪರೆ ರಾಜಕೀಯ ಮುಂದುವರೆಸುವ ಬಗ್ಗೆ ಮಾತನಾಡಿದ್ದೇನೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ಯತ್ನಾಳ ಇಷ್ಟೆಲ್ಲ ಮಾತಾಡಿದ್ದಾನೆ. ನೋಟಿಸ್ ಯಾಕೆ ನೀಡಿಲ್ಲ ಅಂತಾ ಕೆಲವರಿಗೆ ಕಾಡುತ್ತಿದೆ. ಇದೆಲ್ಲ ರಾಜಕೀಯ ವಿರೋಧಿಗಳ ಷಡ್ಯಂತ್ರ ಅಷ್ಟೇ ಎಂದರು.
ಅಲ್ಲದೆ ಯಾವ ಭಯಕ್ಕೂ ಅಂಜುವ ಮಗ ನಾನಲ್ಲ. ನಿನ್ನೆ ವರಿಷ್ಠರೇ ಮಾತನಾಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಣಿಯಲ್ಲೇ ಬಹುದೊಡ್ಡ ನಿರ್ಣಯಗಳು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮುಂದಿನ ಚುನಾವಣೆಗಳ ದೃಷ್ಟಿಯಿಂದ ಬಹಳಷ್ಟು ಬದಲಾವಣೆ ಮಾಡುವ ಸಾಧ್ಯತೆ ಇವೆ. ನನ್ನ ಪರವಾಗಿಯೂ ಒಳ್ಳೆಯ ನಿರ್ಣಯ ಆಗಲಿದೆ ಎಂದರು.