ಈ ಹೊಟೇಲ್ನಲ್ಲಿ ತಿನ್ನೋಕೆ ಇಷ್ಟ ಇಲ್ಲ, ಇಲ್ಲಿ ಇಡ್ಲಿ ಅಷ್ಟು ಸಾಫ್ಟ್ ಇರೋದಿಲ್ಲ, ಚಟ್ನಿ ನೀರು, ಸಾಂಬಾರ್ ಚೂರು ಟೇಸ್ಟ್ ಇಲ್ಲ, ನೀನು ಕೊಡಿಸಿದ ಚಪ್ಪಲಿ ನಂಗಿಷ್ಟ ಆಗ್ಲಿಲ್ಲ, ನಿನ್ ಖುಷಿಗೆ ಅಂತ ತಗೊಂಡೆ ಆದ್ರೆ ಹಾಕೋತಿನೋ ಇಲ್ವೋ ಗೊತ್ತಿಲ್ಲ! ಇವತ್ 31ನೇ ತಾರೀಖು ಅಲ್ವಾ? ಒಂದು ದಿನ ಮುಂಚೆ ಸಂಬಳ ಕೊಟ್ರೆ ಏನಾಗ್ಬಿಡತ್ತೆ, ವೀಕೆಂಡ್ ಅಂತನೂ ಅರ್ಥ ಆಗಲ್ವಾ? ಓನರ್ ಆಂಟಿ ಬೇರೆ ಬಡ್ಕೋತಾರೆ, ನಾಳೆ ಬಾಡಿಗೆ ಕಟ್ಲೇಬೇಕು.. ಥೂ ಕರ್ಮ ನನ್ ಲೈಫ್ ಅಲ್ ಏನೂ ಇಲ್ಲ, ಜೀವನ ಚೆನ್ನಾಗಿಲ್ಲ ಎಂದು ಆಕೆ ಗೊಣಗುತ್ತಲೇ ಇದ್ದಳು..
ಅಲ್ಲೇ ನಿಂತು ನೋಡುತ್ತಿದ್ದ ಬಡವನೊಬ್ಬ, ನನ್ನ ಜೀವನ ಅವರ ರೀತಿ ಇರಬೇಕಿತ್ತು ಎಂದು ಅಂದುಕೊಂಡ!!
ಹೌದು, ನಮ್ಮ ಬಳಿ ಏನಿದ್ರೂ ಸಾಕಾಗೋದಿಲ್ಲ, ಒಳ್ಳೆ ಕೆಲಸ, ಒಳ್ಳೆ ಸಂಬಳ, ಸ್ವಂತ ಮನೆ, ಕಾರು, ಲೋನ್ ಇಲ್ಲದ ಜೀವನ, ಬೇಕಂದಾಗ ಟ್ರಾವೆಲ್ ಮಾಡುವಷ್ಟು, ಶಾಪಿಂಗ್ ಮಾಡುವಷ್ಟು ದುಡ್ಡು, ನಮ್ಮವರಿಗೆ ಸಹಾಯ ಮಾಡುವಷ್ಟು ಹಣ, ಒಳ್ಳೆ ಬಾಸ್, ಉತ್ತಮ ಆರೋಗ್ಯ.. ಹೀಗೆ ಬೇಕುಗಳ ಲಿಸ್ಟ್ ಮುಗಿಯೋದೇ ಇಲ್ಲ ಆದರೆ ನಮ್ಮ ಈ ಕಂಪ್ಲೆಂಟ್ ಜೀವನ ಎಷ್ಟೋ ಜನರ ಕನಸು ಅನ್ನೋದನ್ನು ಮರೆತೇ ಹೋಗಿದ್ದೇವೆ.. ಅಲ್ವಾ?
- ನಮ್ಮ ಬಳಿ ಇರುವುದಕ್ಕೆ ಖುಷಿ ಇರಲಿ, ಇಲ್ಲಗಳ ಮೇಲೆ ಆಸಕ್ತಿ ತೋರಿದಷ್ಟು ದುಃಖ ಹೆಚ್ಚು.
- ದುಃಖದ ಮೂಲ ಹುಡುಕುವ ಬದಲು ಖುಷಿಯ ಮೂಲ ಹುಡುಕಿ, ಇಂದು ಬದುಕಿರುವುದೇ ದೊಡ್ಡ ಮಿರಾಕಲ್ ಅಲ್ವಾ? ಎಷ್ಟೋ ಮಂದಿ ರಾತ್ರಿ ಮಲಗಿದವರು ಇಂದು ಏಳದೇ ಇರಬಹುದು..
- ನಿಮ್ಮ ಬದುಕಿಗೆ, ಬದುಕನ್ನು ನೀಡಿದವರಿಗೆ, ಬದುಕನ್ನು ಸುಂದರವನ್ನಾಗಿಸಿದವರಿಗೆ ಧನ್ಯವಾದ ಹೇಳಿ, ಕೃತಜ್ಞತಾ ಭಾವ ಸದಾ ನಿಮ್ಮಲ್ಲಿರಲಿ.
- ಹೃದಯದಲ್ಲಿ ನೀವು ತುಂಬುವ ಕೃತಜ್ಞತಾ ಭಾವ ನಿಮ್ಮನ್ನು ಸದಾ ಸಕಾರಾತ್ಮಕ ಚಿಂತನೆಗೆ ದೂಡಿ ಮನಸ್ಸನ್ನು ಖುಷಿಯಾಗಿ ಇಟ್ಟುಕೊಳ್ಳುತ್ತದೆ.