ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಲಮಂಗಲದ ಬಿರವಾರ ಗ್ರಾಮದಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಮುದ್ದಾಗಿ ಸಾಕಿದ್ದ ಮಗಳನ್ನು ಕಳೆದುಕೊಂಡ ತಂದೆ ಜೀವನವೇ ಮುಗಿದುಹೋಯ್ತು ಎಂದು ಕಣ್ಣೀರಿಟ್ಟಿದ್ದಾರೆ. ನಿತ್ಯವೂ ತನ್ನ ದೊಡ್ಡಮ್ಮನ ಕೈ ಹಿಡಿದುಕೊಂಡು ಶಾಲೆಗೆ ಮಗಳು ಲಿಖಿತಾ ಹೋಗುತ್ತಿದ್ದಳು. ಇಂದು ರಸ್ತೆ ದಾಟುತ್ತಿದ್ದ ಮಗಳಿಗೆ ಕಾರ್ ಡಿಕ್ಕಿ ಹೊಡೆದು ಕೊಂದು ಹಾಕಿದೆ ಎಂದು ತಂದೆ ಶ್ರೀಕಾಂತ್ ಕಣ್ಣೀರಿಟ್ಟಿದ್ದಾರೆ.
ನನಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಲಿಖಿತಾಳನ್ನು ಮುದ್ದಾಗಿ ಸಾಕಿದ್ದೆವು. ನಾನು ಕೂಲಿ ಕೆಲಸ ಮಾಡುತ್ತೇನೆ ಆದರೆ ಯಾವುದಕ್ಕೂ ಕೊರತೆ ಇಲ್ಲದಂತೆ ಮಗಳನ್ನು ಸಾಕಿದ್ದೆ. ನಿತ್ಯವೂ ಅವಳನ್ನು ಶಾಲೆಗೆ ಕಳಿಸಿ, ಕರೆದುಕೊಂಡು ಬರಲು ಆಗುತ್ತಿರಲಿಲ್ಲ ಅಷ್ಟೆ. ಅಮ್ಮನಿಗೆ ಹುಷಾರಿಲ್ಲ ಹೀಗಾಗಿ ಊರಿಗೂ ಮನೆಗೂ ಓಡಾಡ್ತಾ ಇದ್ದೆ. ಭಾನುವಾರವಷ್ಟೇ ಮನೆಗೆ ಬಂದಿದ್ದೆ. ಮಗಳೇ ನನಗೆ ಕೈಯಾರೆ ನೀರು ಕೊಡುತ್ತಿದ್ದಳು ಎಂದು ಭಾವುಕರಾಗಿದ್ದಾರೆ.
ತಂದೆಯ ಮಾತನ್ನು ಕೇಳಿಸಿಕೊಂಡ ಜನರ ಕಣ್ಣಾಲಿಗಳು ಕೂಡ ಒದ್ದೆಯಾಗಿವೆ. ಶತ್ರುಗೂ ಈ ರೀತಿಯ ದುಃಖ ನೀಡಬಾರದು ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.



