ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೂ ಶಬರಿಮಲೆ ಅಯ್ಯಪ್ಪಸ್ವಾಮಿಯ ದರುಶನ ಪಡೆಯಬೇಕೆಂಬ ಬಯಕೆಯಿದೆ ಎಂದು ಚರ್ಚ್ ಒಂದರ ಪಾದ್ರಿ ತಮ್ಮ ಪರವಾನಗಿಯನ್ನು ಹಿಂತಿರುಗಿಸಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
ತಿರುವನಂತಪುರ ಮೂಲದ ರೇವ್ ಮನೋಜ್ ಕೆ.ಜಿ (50) ಎನ್ನುವ ಪಾದ್ರಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ 41ದಿನಗಳ ಕಠಿಣ ವ್ರತ ಕೈಗೊಂಡು ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾ ಅಡಿಯಲ್ಲಿ ಬರುವ ಚರ್ಚ್ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರೇವ್ ಮನೋಜ್ , ನನ್ನ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಚರ್ಚ್ ಆಡಳಿತ ಮಂಡಳಿಯು ಹೇಳಿತ್ತು. ತಮ್ಮ ನಿರ್ಧಾರದ ಕುರಿತು ವಿವರವಾದ ವಿವರಣೆಯನ್ನು ನೀಡುವಂತೆ ಆಡಳಿತ ಮಂಡಳಿ ಕೇಳಿತ್ತು. ನಾನು ವಿವರಣೆ ನೀಡುವ ಬದಲು ನನಗೆ ನೀಡಲಾಗಿದ್ದ ಪರವಾನಗಿ ಹಾಗೂ ಐಡಿ ಕಾರ್ಡ್ಅನ್ನು ಹಿಂತಿರುಗಿಸಿದ್ದೇನೆ ಎಂದಿದ್ದಾರೆ.
ನಾನು ಮೊದಲಿಗೆ ದೇವರ ಸಿದ್ದಾಂತಗಳನ್ನು ಅಳವಡಿಸಿಕೊಂಡವನು. ದೇವರು ಯಾವುದೇ ಜಾತಿ, ಮತ, ಧರ್ಮ ಲೆಕ್ಕಿಸದೆ ಪ್ರೀತಿ ಮಾಡು ಎನ್ನುತ್ತಾರೆ. ಹೀಗಾಗಿ ಚರ್ಚ್ಅನ್ನು ಪ್ರೀತಿಸಬೇಕೋ ಅಥವಾ ದೇವರನ್ನೋ ಎಂದು ನನಗೆ ತಿಳಿಯಲಿಲ್ಲ. ಚರ್ಚ್ನ ಸಿದ್ದಾಂತಗಳಿಗೆ ತಕ್ಕಂತೆ ನಾನು ಕೆಲಸ ಮಾಡುವವನಲ್ಲ ಎಂದು ಹೇಳಿದ್ದಾರೆ. ಮನೋಜ್ ಅವರು ಸೆಪ್ಟೆಂಬರ್ 20ರಂದು ಶಬರಿಮಲೆಗೆ ಭೇಟಿ ನೀಡಲಿದ್ದಾರೆ.
ನಾನು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದವ ಅಧ್ಯಾತ್ಮಿಕ ಭೋಧನೆಗಳಿಗೆ ಮಾಹಿತಿ ಕಲೆ ಹಾಕಲು ಪಾದ್ರಿಯಾದೆ. ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂಬ ಭಾವನೆ ನನಗಿದೆ. ಹಿಂದು ಧರ್ಮ ಮತ್ತು ಅದರಲ್ಲಿನ ಆಚರಣೆಗಳನ್ನು ಮೀರಿ ಅರ್ಥ ಮಾಡಿಕೊಳ್ಳುವುದು ನನ್ನ ಉದ್ದೇಶವಾಗಿದೆ ಎಂದು ಪಾದ್ರಿ ಮನೋಜ್ ತಿಳಿಸಿದ್ದಾರೆ.