ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮೇಲಿನ ದ್ವೇಷದಿಂದಾಗಿ ಮಗನನ್ನು ಬಲಿ ತೆಗೆದುಕೊಂಡಿದ್ದಾರೆ. ಅವನ ಬದಲಿಗೆ ನನ್ನನ್ನು ಸಾಯಿಸಬೇಕಾಗಿತ್ತು, ರಾಜಕೀಯ ಸೇಡಿಗೆ ಬಲಿಯಾಗಿದ್ದಾನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ರಾಜಕೀಯ ದ್ವೇಷಕ್ಕೆ ಸಹೋದರನ ಪುತ್ರ ಬಲಿಪಶುವಾಗಿದ್ದಾನೆ. ನಾನು ಅನುಭವಿಸುತ್ತಿರುವ ನೋವಿಗೆ ಮಿತಿಯೇ ಇಲ್ಲ ಎಂದು ರೇಣುಕಾಚಾರ್ಯ ಕಣ್ಣೀರಿಟ್ಟರು.
ಆತ ನಾಪತ್ತೆಯಾದ ದಿನದಿಂದಲೂ ಅಪಹರಣವಾಗಿದೆ ಎಂದು ನಾನು ಹೇಳಿದ್ದೆ. ಚಂದ್ರಶೇಖರ್ ಗೆ ಕರೆ ಮಾಡಿ ದುಷ್ಕರ್ಮಿಗಳು ಕರೆಸಿಕೊಂಡಿದ್ದಾರೆ. ಕೊಲೆಗಾರರು ಆತನಿಗೆ ಫೋನ್ ಮಾಡಿದಾಗ ಗೌರಿಗದ್ದೆಗೆ ಹೋಗುತ್ತಿರುವುದಾಗಿ ಹೇಳಿದ್ದ. ಆದರೆ ಜೀವಂತವಾಗಿ ವಾಪಸ್ ಬರಲಿಲ್ಲ.
ಈ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಿಎಂ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿರುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ.