ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಲವು ನಾಯಕರಿಗೆ ಗಾಳ ಹಾಕಿರುವುದು ನಿಜ, ಆದರೆ ನಾವ್ಯಾರೂ ಹೋಗುವುದಕ್ಕೆ ಸಿದ್ಧವಿಲ್ಲ. ನಾನು ರಾಜಕೀಯ ಬಿಡುತ್ತೇನೆಯೇ ಹೊರತು ಬಿಜೆಪಿ ಬಿಡುವುದಿಲ್ಲ ಎಂದು
ಸಚಿವ ಮುನಿರತ್ನ ಹೇಳಿದ್ದಾರೆ.
ಈ ಕುರಿತು ವಿಕಾಸಸೌಧದಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಹಲವು ನಾಯಕರನ್ನು ಭೇಟಿ ಮಾಡುತ್ತಿರುವುದು ನಿಜ. ಅವರ ಪ್ರಯತ್ನ ನಡೆಯುತ್ತಲೇ ಇದೆ. ಅವರು ಎಲ್ಲರ ಜತೆ ಸಂಪರ್ಕ ಮಾಡುತ್ತಿದ್ದಾರೆ. ಈ ಪ್ರಯತ್ನ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದೆ. ಆದರೆ ನಾವೆಲ್ಲ ನಿಮ್ಮ ಸಹವಾಸ ಬೇಡ, ಬಿಜೆಪಿ ಬಿಡೊಲ್ಲ ಅಂತ ಹೇಳಿದ್ದೇವೆ. ಆದರೂ ನಿಮಗಾಗಿ ಕಾಯುತ್ತಿದ್ದೇವೆ ಅಂತ ಹೇಳಿದರು ಎಂದು ಮುನಿರತ್ನ ತಿಳಿಸಿದ್ದಾರೆ.
ʻʻನಾನು ರಾಜಕೀಯ ಬಿಡುತ್ತೇನೆಯೇ ಹೊರತು ಬಿಜೆಪಿ ಬಿಡುವುದಿಲ್ಲ. ನಾವು ಪಕ್ಷದಲ್ಲಿ ಇದ್ದಾಗ ಕಾಲ ಕಸ ಮಾಡಿದ್ದರು. ಅವತ್ತು ಸರಿಯಾಗಿ ನಡೆದುಕೊಂಡಿದ್ದರೆ ಅವರಿಗೆ ಇವತ್ತು ಈ ರೀತಿಯ ಪರಿಸ್ಥಿತಿ ಬರುತ್ತಿರಲಿಲ್ಲ. ನನಗೆ ಬಿಜೆಪಿ ಎಲ್ಲವನ್ನು ಕೊಟ್ಟಿದೆ. ನಾನು ಖಂಡಿತ ಬಿಜೆಪಿ ಬಿಡೊಲ್ಲʼʼ ಎಂದು ಹೇಳಿದರು.
ಅವರು ವಿಕಾಸ ಸೌಧದಲ್ಲಿ ತಮ್ಮ ಇಲಾಖೆಯ ಸಾಧನೆಯ ಬಗ್ಗೆ ಮಾತನಾಡುತ್ತಾ ರಾಜಕೀಯ ವಿಷಯಗಳನ್ನೂ ಪ್ರಸ್ತಾಪಿಸಿದರು.