ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಟಿ20 ವಿಶ್ವಕಪ್ ನಲ್ಲಿ ಇಂದು ಜಿಂಬಾಬ್ವೆ ತಂಡದ ವಿರುದ್ಧ ಟೀಂ ಇಂಡಿಯಾ ಸೆಣೆಸಲಿದೆ. ಮೇಲ್ಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು ಇದುವರೆಗೂ ಸೆಮಿಸ್ ಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳದ ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿತ್ತು. ಆದರೆ ಇದೀಗ ಟೀಂ ಇಂಡಿಯಾಗೆ ಗುಡ್ ನ್ಯೂಸ್ ಸಿಕ್ಕಿದೆ. ನೆದರ್ ಲ್ಯಾಂಡ್ಸ್ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದು ಇದರಿಂದಾಗಿ ಸೆಮೀಸ್ ಗೆ ಭಾರತ ಎಂಟ್ರಿ ಪಕ್ಕಾ ಆಗಿದೆ.
ಇಂದು ಸೂಪರ್ 12 ಹಂತದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ಸ್ ನಡುವಣ ಪಂದ್ಯದಲ್ಲಿ ಇಡೀ ಟೂರ್ನಿಯಲ್ಲಿ ಒಂದು ಬಾರಿಕೂಡ ಸೋಲು ಕಾಣದೆ ಸೆಮಿ ಫೈನಲ್ಗೇರುವ ಹುಮ್ಮಸ್ಸಿನಲ್ಲಿದ್ದ ಸೌತ್ ಆಫ್ರಿಕಾಗೆ ಸೋಲಿನ ಮುಖಭಂಗವುಂಟಾಗಿದ್ದು ನೆದರ್ಲೆಂಡ್ಸ್ ವಿರುದ್ಧ ಸೋತ ಪರಿಣಾಮ ಸೆಮೀಸ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ. ಇದರ ಪರಿಣಾಮ ಭಾರತವು ಜಿಂಬಾಬ್ವೆ ವಿರುದ್ಧ ಪಂದ್ಯವಾಡುವುದಕ್ಕೂ ಮುನ್ನವೇ ಸೆಮೀಸ್ ಗೆ ಲಗ್ಗೆ ಇಟ್ಟಿದೆ. ಆದ್ದರಿಂದ ಇದೀಗ ಜಿಂಬಾಬ್ವೆಯ ವಿರುದ್ಧ ಪಂದ್ಯವನ್ನು ಸೋತರೂ ಸೆಮೀಸ್ ಗೆ ಪ್ರವೇಶಿಸಲು ಯಾವುದೇ ತೊಂದರೆಯಾಗದು.
ಭಾರತ ಈವರೆಗೆ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಂದರಲ್ಲಿ ಸೋತು 6 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದು +0.730 ರನ್ರೇಟ್ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಐದು ಪಂದ್ಯಗಳನ್ನಾಡಿದ್ದು ಅವುಗಳ ಪೈಕಿ ಒಂದು ಮಳೆಯಿಂದ ರದ್ದಾದರೆ ತಲಾ ಎರಡು ಸೋಲು ಗೆಲುವಿನಿಂದ 5 ಅಂಕ ಪಡೆದು +0.864 ರನ್ರೇಟ್ ಪಡೆದು ದ್ವಿತೀಯ ಸ್ಥಾನದಲ್ಲಿದೆ.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ನಾಲ್ಕು ಪಂದ್ಯಗಳನ್ನಾಡಿದ್ದು ಅವುಗಳಲ್ಲಿ ಎರಡು ಸೋಲು ಎರಡು ಗೆಲುವು ಪಡೆದು ರನ್ರೇಟ್ ಆಧಾರದ ಮೇಲೆ ಪಾಕ್ ಮೂರನೇ ಸ್ಥಾನದಲ್ಲಿದೆ ಹಾಗೂ ಬಾಂಗ್ಲಾ ಐದನೇ ಸ್ಥಾನದಲ್ಲಿದೆ. ಹೀಗಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯ ಮೂರು ತಂಡಗಳ ಸೆಮೀಸ್ ಭವಿಷ್ಯ ನಿರ್ಧರಿಸಲಿದೆ.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಪಾಕ್ ಗೆದ್ದರೆ 6 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಏರಲಿದ್ದು ಸೆಮಿ ಫೈನಲ್ಗೆ ಕ್ವಾಲಿಫೈ ಆಗಲಿದೆ. ಬಾಂಗ್ಲಾ ಗೆದ್ದರೂ 6 ಅಂಕ ಪಡೆಯಲಿದೆ. ಈ ಪಂದ್ಯ ರದ್ದಾದರಷ್ಟೆ ಸೌತ್ ಆಫ್ರಿಕಾಗೆ ಸೆಮೀಸ್ ಹಾದಿ ರನ್ರೇಟ್ ಆಧಾರದ ಮೇಲೆ ನಿರ್ಧಾರವಾಗಲಿದೆ.
ಭಾರತ Vs ಜಿಂಬಾಬ್ವೆ
ಈ ಹಿಂದೆ ಸೆಮಿ ಫೈನಲ್ಗೆ ಎಂಟ್ರಿಯ ವಿಚಾರವಾಗಿ ಭಾರತದ ಪಾಲಿಗೆ ಭವಿಷ್ಯ ನಿರ್ಧರಿಸಲಿದ್ದ ಈ ಪಂದ್ಯದಲ್ಲಿ ಭಾರತ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಆದರೆ ಇದೀಗ ಭಾರತದ ಸೆಮೀಸ್ ಹಾದಿ ಸುಗಮವಾಗಿದೆ. ಆದರೂ ಜಿಂಬಾಬ್ವೆಯ ವಿರುದ್ಧದ ಗೆಲುವು ಅಂಕಪಟ್ಟಿಯಲ್ಲಿ ಭಾರತಕ್ಕೆ ಹೆಚ್ಚಿನ ಬಲ ಕೊಡಲಿದೆ.
ಭಾರತವೇ ಗೆಲ್ಲುತ್ತದೆ ಎಂಬ ನಿರೀಕ್ಷೆಗಳಿದ್ದರೂ ಪಾಕಿಸ್ತಾನಕ್ಕೆ ಆಘಾತಕಾರಿ ಸೋಲುಣಿಸಿದ್ದ ಜಿಂಬಾಬ್ವೆಯನ್ನು ಕಡೆಗಣಿಸುವಂತಿಲ್ಲ.
ಕೆ.ಎಲ್.ರಾಹುಲ್ ಫಾರ್ಮ್ ಗೆ ಮರಳಿರುವುದು ಖುಷಿಯ ವಿಚಾರವಾದರೆ ನಾಯಕ ರೋಹಿತ್ ಶರ್ಮಾಕೂಡ ದೊಡ್ಡ ಪ್ರದರ್ಶನ ನೀಎಬೇಕಿದೆ. ಇನ್ನು ಅಬ್ಬರಿಸಿ ಮಿಂಚುತ್ತಿರುವ ಕಿಂಗ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಜೋಡಿ ಮತ್ತೊಮ್ಮೆ ಬೊಬ್ಬಿರಿಯಲು ಸಜ್ಜಾಗಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯಾ ಹಾಗೂ ದಿನೇಶ್ ಕಾರ್ತಿಕ್ ಅವರಿಗೂ ಉತ್ತಮ ಪ್ರದರ್ಶನ ನೀಡಲೇ ಬೇಕಿದೆ. ಈ ಪಂದ್ಯಾಟದಲ್ಲಿ ವಿಫಲರಾಗುತ್ತಿರುವ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆರ್.ಅಶ್ವಿನ್ ಬದಲು ಯಜುವೇಂದ್ರ ಚಹಲ್ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಇನ್ನು, ವೇಗದ ಬೌಲಿಂಗ್ನಲ್ಲಿ ಭುವನೇಶ್ವರ್ಕುಮಾರ್, ಅರ್ಶದೀಪ್ ಹಾಗೂ ಮೊಹಮದ್ ಶಮಿ ಉತ್ತಮ ಆಟವಾಡುತ್ತಿದ್ದು ಜಿಂಬಾಬ್ವೆಯ ವಿರುದ್ಧವೂ ಮಿಂಚಲು ಸಜ್ಜಾಗಿದ್ದಾರೆ.
ಸಂಭಾವ್ಯ ತಂಡ:
ಭಾರತ: ಕೆ ಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್.
ಜಿಂಬಾಬ್ವೆ: ವೆಸ್ಲೆ ಮಧೆವೆರೆ, ಕ್ರೆಗ್ ಎರ್ವಿನ್(ನಾಯಕ), ಮಿಲ್ಟನ್ ಶುಂಭಾ, ಶೀನ್ ವಿಲಿಯಮ್ಸ್, ಸಿಕಂದರ್ ರಾಜಾ, ರೇಗಿಸ್ ಚಕಬ್ವಾ, ರೆಯನ್ ಬರ್ಲ್, ಎವಾನ್ಸ್, ಎನ್ಗರಾವ, ಮುಜರಬಾನಿ, ಚಟಾರ