ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಪ್ರತಿಭಟನೆ ಮೂಲಕ ತಡೆಯುವುದು ಎಷ್ಟು ಸರಿ ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಅವರ ಸಚಿವರೇ ಹೇಳುತ್ತಿದ್ದಾರೆ. ಹೀಗಿರುವಾಗ ಸರ್ಕಾರದ ಕಣ್ಣು ತೆರೆಸಲು ನೆರೆ ಪ್ರದೇಶಕ್ಕೆ ವಿಪಕ್ಷ ನಾಯಕರು ಭೇಟಿ ನೀಡಿದರೆ, ಸರ್ಕಾರದ ಆಡಳಿತ ವೈಖರಿ ಬಗ್ಗೆ ಟೀಕಿಸಿದರೆ ಪ್ರತಿಭಟಿಸುವುದು ಯಾಕೆ? ನಮ್ಮ ಕಾರ್ಯಕರ್ತರು ನಿಮ್ಮ ಕಾರ್ಯಕ್ರಮಗಳನ್ನು ಪ್ರತಿಭಟಿಸಿದರೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನಾಗಬಹುದು? ನಿಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ. ಇಲ್ಲವಾದಲ್ಲಿ ನಮಗೆ ಬೇರೆ ದಾರಿ ಇಲ್ಲ. ನಿಮ್ಮ ಕಾರ್ಯಕ್ರಮಗಳಿಗೂ ನಾವು ಪ್ರತಿಭಟನೆ ವ್ಯಕ್ತಪಡಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾರೆ. ಹೇಳಿಕೆಗಳ ಬಗ್ಗೆ ಟೀಕೆ ಮಾಡುವುದು ಪ್ರಜಾಪ್ರಭುತ್ವದ ಭಾಗ. ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಖಂಡನೀಯ ಎಂದರು.