ಹೊಸದಿಗಂತ ವರದಿ ವಿಜಯಪುರ:
ಭೀಮಾತೀರದ ನಟೋರಿಯಸ್ ಹಂತಕ ಮಲ್ಲಿಕಾರ್ಜುನ ಚಡಚಣನ ಮೇಲೆ ಉದ್ಘೋಷಣೆ ಮಾಡಲಾಗಿದ್ದು, ಮಲ್ಲಿಕಾರ್ಜುನ ಚಡಚಣ, ವಿಮಲಾಬಾಯಿ ಶರಣಾಗತಿ ಆಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಲಾಗುತ್ತದೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಲ್ಲಿಕಾರ್ಜುನ ಚಡಚಣನ ಮೇಲೆ 20 ಕೇಸ್ಗಳಿವೆ. ಅಲ್ಲದೆ ರೌಡಿಶೀಟರ್ ಮಹಾದೇವ ಸಾಹುಕಾರ್ ಭೈರಗೊಂಡ ಮೇಲೆ 40 ಜನರು ಹತ್ಯೆಗೆ ಯತ್ನಿಸಿದ್ದರು. ಈ ಪ್ರಕರಣದಲ್ಲಿ 36 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಮಲ್ಲಿಕಾರ್ಜುನ ಚಡಚಣ, ವಿಮಲಾಬಾಯಿ ಸೇರಿ ಇನ್ನಿಬ್ಬರು ಪರಾರಿಯಾಗಿದ್ದಾರೆ. ಹೀಗಾಗಿ ಉಳಿದ ನಾಲ್ವರು ಆರೋಪಿಗಳನ್ನು ಆದಷ್ಟು ಬೇಗನೆ ಬಂಧನ ಮಾಡಲಾಗುವುದು ಎಂದರು.
ಮಲ್ಲಿಕಾರ್ಜುನ ಚಡಚಣ ಮೊಬೈಲ್ ಬಳಕೆ ಮಾಡುತ್ತಿಲ್ಲ. ಇದರಿಂದ ಆತನ ಸುಳಿವು ಸಿಗುತ್ತಿಲ್ಲ. ಅಲ್ಲದೇ, ಪೊಲೀಸರಿಗೆ ಶರಣಾಗುವಂತೆ ಉದ್ಘೋಷಣೆ ಹೊರಡಿಸಿ, ಚಡಚಣ ಭಾಗದಲ್ಲಿ ಡಂಗೂರ ಮೂಲಕ ಜಾಗೃತಿ ಮಾಡಲಾಗಿದೆ. ಮಲ್ಲಿಕಾರ್ಜುನ ಚಡಚಣ, ವಿಮಲಾಬಾಯಿ ಶರಣಾಗತಿ ಆಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಲಾಗುತ್ತದೆ ಎಂದರು.