ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯೋಧ್ಯೆ ರಾಮ ಮಂದಿರ ತೀರ್ಪು ಹೊರಬಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ, ಅಧಿಕಾರ ನೀಡಿದರೆ ನಾನು ಆಯೋಧ್ಯೆ ರಾಮ ಮಂದಿರ ನಿರ್ಧಾರವನ್ನೇ ಬದಲಿಸುತ್ತೇನೆ. ಇದಕ್ಕಾಗಿ ಸೂಪರ್ ಪವರ್ ಕಮಿಷನ್ ನೇಮಕ ಮಾಡುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ಸ್ಫೋಟಕ ಮಾಹಿತಿಯನ್ನು ಕಾಂಗ್ರೆಸ್ ಮಾಜಿ ನಾಯಕ ಪ್ರಮೋದ್ ಆಚಾರ್ಯ ಕೃಷ್ಣಂ ಬಹಿರಂಗಪಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಆಚಾರ್ಯ ಪ್ರಮೋದ್, ನಾನು ಕಳೆದ 32 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಸೇವೆ ಸಲ್ಲಿಸಿದ್ದೇನೆ. ಕಾರ್ಯಕರ್ತನಾಗಿ, ನಾಯಕನಾಗಿ ದುಡಿದಿದ್ದೇನೆ. ರಾಮ ಮಂದಿರ ತೀರ್ಪು ಹೊರಬಿದ್ದಾಗ, ರಾಹುಲ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾದ ಮಾತುಗಳನ್ನು ಪ್ರಮೋದ್ ಆಚಾರ್ಯ ಬಹಿರಂಗಪಡಿಸಿದ್ದಾರೆ.
ರಾಮ ಮಂದಿರ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ವೇಳೆ ರಾಹುಲ್, ನಮ್ಮ ಕೈಗೆ ಅಧಿಕಾರ ನೀಡಿದರೆ ಈ ತೀರ್ಪನ್ನು ಬದಲಿಸುತ್ತೇನೆ. ಇದಕ್ಕಾಗಿ ಸೂಪರ್ ಪವರ್ ಕಮಿಷನ್ ನೇಮಕ ಮಾಡುತ್ತೇನೆ. ಈ ಸೂಪರ್ ಪವರ್ ಕಮಿಷನ್ ತೀರ್ಪನ್ನೇ ಬದಲಿಸಲಿದೆ. ಹೀಗೆ ಅಂದರೆ ರಾಜೀವ್ ಗಾಂಧಿ ಶಹಭಾನೋ ಪ್ರಕರಣದಲ್ಲಿ ತೀರ್ಪು ಬದಲಾಯಿಸಿದ ರೀತಿ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ಪ್ರಮೋದ್ ಆಚಾರ್ಯ ಹೇಳಿದ್ದಾರೆ.
ರಾಹುಲ್ ಗಾಂಧಿ ಮಾತುಗಳನ್ನು ವಿದೇಶದಲ್ಲಿ ನೆಲೆಸಿರುವ ಆಪ್ತರು ಹಾಗೂ ಸಲಹೆಗಾರರ ಬಳಿ ಹೇಳಿಕೊಂಡಿದ್ದರು ಈ ಮೂಲಕ ರಾಹುಲ್ ಗಾಂಧಿ ತಮ್ಮ ಆಪ್ತ ಸಲಹೆಗಾರ ಸ್ಯಾಮ್ ಪಿತ್ರೋಡ ಬಳಿ ಹೇಳಿಕೊಂಡಿದ್ದರು ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ಮಾತುಗಳ ಬಳಿಕ ಸ್ಯಾಮ್ ಪಿತ್ರೋಡ ರಾಮ ಮಂದಿರ ಪ್ರಾಣಪ್ರತಿಷ್ಠೆ ಹಾಗೂ ಪ್ರಧಾನಿ ಮೋದಿ ಪಾಲ್ಗೊಳ್ಳುವಿಕೆ ಕುರಿತು ಸತತ ಆರೋಪ ಮಾಡಿದ್ದರು. ಇದನ್ನು ಭಾರತ ಗಮನಿಸಿದೆ ಎಂದು ಪ್ರಮೋದ್ ಆಚಾರ್ಯ ಹೇಳಿದ್ದಾರೆ.
ಧರ್ಮವನ್ನು ರಾಜಕೀಯದಲ್ಲಿ ಬೆರೆಸಬೇಡಿ, ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟನೆ ಯಾಕೆ ಮಾಡಬೇಕು, ಜವಾಹರ್ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಂಡಿಲ್ಲ ಎಂಬ ಹೇಳಿಕೆಯನ್ನು ಸ್ಯಾಮ್ ಪಿತ್ರೋಡ ನೀಡಿದ್ದರು. ಈ ಎಲ್ಲಾ ಹೇಳಿಕೆಗಳ ಹಿಂದೆ ರಾಹುಲ್ ಗಾಂಧಿಯ ಭರವಸೆಗಳಿತ್ತು ಎಂದು ಪ್ರಮೋದ್ ಆಚಾರ್ಯ ಹೇಳಿದ್ದಾರೆ.