ಹೊಸದಿಗಂತ ವರದಿ,ಚಿತ್ರದುರ್ಗ :
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕಾರಣ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಇಂತಹ ಘಟನೆಗಳ ಆರಂಭವಾಗಿದ್ದು, ಕಾಂಗ್ರೆಸ್ ಕಾಲದಲ್ಲಿ ಮತ್ತೆ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದರು.
ಲೋಕಸಭಾ ಕ್ಷೇತ್ರದ ಬೂತ್ ಪ್ರಮುಖರ ಸಭೆಯ ಅಂಗವಾಗಿ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ ಯಾವುದೇ ಬಾಂಬ್ ಸ್ಫೋಟ ಆಗುತ್ತಿರಲಿಲ್ಲ. ಬಾಂಬರ್ ಬಂಧನ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಆಗುತ್ತಿದ್ದು, ಪೊಲೀಸರಿಗೆ ಫ್ರೀಹ್ಯಾಂಡ್ ಇಲ್ಲದ ಕಾರಣ ಬಾಂಬರ್ ಬಂಧನ ವಿಳಂಬ ಆಗುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ಎಂದಿಗೂ ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡುವುದಿಲ್ಲ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಬಿಜೆಪಿಯ ಮೂಲಮಂತ್ರ ಆಗಿದೆ. ಆದರೆ ಕಾಂಗ್ರೆಸ್ ಅಂದರೆ ಸ್ಕ್ಯಾಮ್, ಕಾಂಗ್ರೆಸ್ ಅಂದರೆ ಕರಪ್ಟ್ ಆಗಿದ್ದು, ಕಾಂಗ್ರೆಸ್ ಜನರನ್ನು ವಿಭಜನೆ ಮಾಡುತ್ತದೆ. ಇಂತಹ ಕರಪ್ಟ್ ಕಾಂಗ್ರೆಸ್ನ್ನು ಮನೆಗೆ ಕಳಿಸಿ, ಡಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಡಬಲ್ ಇಂಜನ್ ಸರ್ಕಾರವಿದ್ದಾಗ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿದ್ದವು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿಂದ ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಸರ್ಕಾರ ಆಡಳಿತಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಭರವಸೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದಿದ್ದು, ಚುನಾವಣೆಗೆ ಮುನ್ನಾ ಘೋಷಿಸಿದ ಒಂದು ಗ್ಯಾರಂಟಿಯೂ ಪೂರ್ಣಗೊಳಿಸಿಲ್ಲ. ಕರ್ನಾಟಕ ರಾಜ್ಯದ ಜನರಿಗೆ ಈಗಾಗಲೇ ಇದು ಅನುಭವಕ್ಕೆ ಬಂದಿದೆ. ಕರ್ನಾಟಕದ ಜನ ಈಗ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಹೇಳಿದ ಅವರು, ಬೈ ಮಿಸ್ಟೇಕ್ ಕಾಂಗ್ರೆಸ್ ಆಡಳಿತ ನಡೆಸಲು ಅವಕಾಶ ನೀಡಿದ ಭಾವನೆ ಜನರಲ್ಲಿದ್ದು, ಶೀಘ್ರದಲ್ಲೇ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರುವ ವಿಶ್ವಾಸವಿದೆ ಎಂದರು.
೭೦ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲಾಗದ ಸಾಧನೆ ಮೋದಿ ಕಾಲದಲ್ಲಾಗಿದೆ. ಎಲ್ಲಾ ವಿಭಾಗದಲ್ಲೂ ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ. ಹಾಗಾಗಿ ರಾಜ್ಯದ ೨೮ ಕ್ಕೆ ೨೮ ಕ್ಷೇತ್ರದಲ್ಲಿ ಎನ್ಡಿಎ, ಮೋದಿಗೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.