ಹೊಸದಿಗಂತ ಡಿಜಿಟಲ್ ಡೆಸ್ಕ್
ಯಾರು ಮದ್ಯಪಾನ ಮಾಡುತ್ತಾರೋ ಅವರು ಸಾಯುತ್ತಾರೆ.ಜನರು ಜಾಗರೂಕರಾಗಿರಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಕಳ್ಳಬಟ್ಟಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ ಎಂದ ನಿತೀಶ್ ಕುಮಾರ್ , ರಾಜ್ಯ ಸರ್ಕಾರ 2016ರಲ್ಲಿಯೇ ಮದ್ಯ ನಿಷೇಧ ಮಾಡಿರುವಾಗ ಜನರು ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ.
ಮದ್ಯ ದುರಂತದಲ್ಲಿ ಸಾವಿಗೀಡಾದವರಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಜೋ ಶರಾಬ್ ಪೀಯೇಗಾ ವೋ ತೋ ಮರೇಗಾ ಹೀ ನಾ, ಉದಾಹರಣ್ ಸಾಮ್ನೇ ಹೈ, ಪಿಯೋಗೇ ತೋ ಮರೋಗೆ ( ಮದ್ಯ ಕುಡಿದವನು ಸಾಯ್ತಾನೆ. ಉದಾಹರಣೆ ನಮ್ಮ ಮುಂದೆಯೇ ಇದೆ. ಕುಡಿದರೆ ಸಾಯ್ತೀರಿ) ಎಂದಿದ್ದಾರೆ.
ಮದ್ಯ ದುರಂತದಲ್ಲಿ ಮಡಿದವರ ಬಗ್ಗೆ ಸಂತಾಪ ವ್ಯಕ್ತ ಪಡಿಸಿದ ಕುಮಾರ್, ಜನರಲ್ಲಿ ಜಾಗೃತಿ ಮೂಡಿಸಬೇಕು. ನಾವು ಸಮಾಜದಲ್ಲಿ ಜಾಗೃತಿ ಉಂಟು ಮಾಡಲು ಅಭಿಯಾನಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡಿದಾಗ ಕೋಪಗೊಂಡ ನಿತೀಶ್ ಕುಮಾರ್, ನೀವೂ ಕುಡಿದಿದ್ದೀರಿ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು.
ಇತ್ತೀಚೆಗೆ ಸರಾನ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ ಸುಮಾರು 30ಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.