ಹೊಸದಿಗಂತ ಡಿಜಿಟಲ್ ಡೆಸ್ಕ್
ಧರ್ಮವು ಕಾನೂನಿಗಿಂತ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ.
ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ವಿವಾದ ಮುಂದುವರೆದಿದ್ದು, ಈ ಹಿನ್ನೆಲೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಯಾವುದೇ ಗಲಭೆಗಳನ್ನು ನಾವು ಬಯಸುವುದಿಲ್ಲ, ಮೇ 3ರ ನಂತರ ಮುಂದಿನ ನಡೆಯೇನು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ನಮಗೆ ಮಹಾರಾಷ್ಟ್ರದಲ್ಲಿ ಗಲಭೆಗಳು ಬೇಕಾಗಿಲ್ಲ. ಪ್ರಾರ್ಥನೆ ಸಲ್ಲಿಸುವುದನ್ನು ಯಾರೂ ವಿರೋಧಿಸಿಲ್ಲ. ಆದರೆ ಪ್ರಾರ್ಥನೆಯ ವೇಳೆ ಧ್ವನಿವರ್ಧಕ ಬಳಸಿದರೆ, ನಾವೂ ಕೂಡಾ ಅದಕ್ಕೆ ಪ್ರತಿಯಾಗಿ ಧ್ವನಿವರ್ಧಕ ಬಳಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಇತ್ತೀಚೆಗಷ್ಟೇ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯಲು ಸರ್ಕಾರಕ್ಕೆ ಗಡುವು ನೀಡಿದ್ದರು. ಮೇ 3ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದಿದ್ದ ಅವರು, ಒಂದು ವೇಳೆ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ, ಮಸೀದಿಯ ಹೊರಗೆ ಹನುಮಾನ್ ಚಾಲೀಸಾ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು.