ಹೊಸದಿಗಂತ ವರದಿ, ಅಂಕೋಲಾ:
ಮಾದಕ ವಸ್ತುಗಳ ಮಾರಾಟಗಾರರಿಗೆ ಬಿಸಿ ಮುಟ್ಟಿಸುವ ಪೊಲೀಸರ ಕ್ರಮ ಜಿಲ್ಲೆಯಲ್ಲಿ ಮುಂದುವರಿದಿದ್ದು ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾಕರಮಠದಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಕರಮಠ ನಿವಾಸಿ ಅಪ್ತಾಬ್ ಅಲ್ತಾಪ ಶೇಖ (31) ಬಂಧಿತ ಆರೋಪಿಯಾಗಿದ್ದು ಈತನಿಂದ ಸುಮಾರು 7500 ರೂಪಾಯಿ ಮೌಲ್ಯದ 163 ಗ್ರಾಂ ಗಾಂಜಾ ಮತ್ತು ಸಾಗಾಟಕ್ಕೆ ಬಳಸಿದ 30 ಸಾವಿರ ರೂಪಾಯಿ ಮೌಲ್ಯದ ಸ್ಕೂಟಿ ವಾಹನ ವಶಪಡಿಸಿಕೊಳ್ಳಲಾಗಿದೆ.
ಆರೋಪಿತನು ಅಂಬಾರಕೊಡ್ಲ ರಸ್ತೆಯ ಅಲ್ ಬಿಲಾಲ್ ಮಸೀದಿ ಬಳಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಂಕೋಲಾ ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಪಿ.ಎಸ್. ಐ ಗಳಾದ ಪ್ರೇಮನಗೌಡ ಪಾಟೀಲ್, ಮಹಾಂತೇಶ ವಾಲ್ಮೀಕಿ ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ರೋಹಿದಾಸ ದೇವಾಡಿಗ, ಶ್ರೀಕಾಂತ ಕಟಬರ, ನಾಗರಾಜ ಹೋತನಹಳ್ಳಿ, ಮನೋಜ,.ಡಿ, ಗುರುರಾಜ ನಾಯ್ಕ, ಸತೀಶ ಅಂಬಿಗ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.