ಹೊಸದಿಗಂತ ವರದಿ ಧಾರವಾಡ:
ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಾನೇ. ಮೋಹನ್ ಲಿಂಬಿಕಾಯಿ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು. ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ವರಿಷ್ಠರು ನಾನೇ ಅಭ್ಯರ್ಥಿ ಎಂದು ಮೌಖಿಕವಾಗಿ ಹೇಳಿದ ಹಿನ್ನಲೆ ಚುನಾವಣಾ ತಯಾರಿ ನಡೆಸಿದ್ದೇನೆ ಎಂದರು.
ರಾಜ್ಯಮಟ್ಟದ ನಾಯಕರು ಬಿಜೆಪಿ ಅಭ್ಯರ್ಥಿ ಅಂತಲೇ ನನ್ನನ್ನು ಕರೆ ತಂದಿದ್ದಾರೆ. ಪಕ್ಷದ ಸಿದ್ಧಾಂತ, ನಿಯಮಗಳ ಪ್ರಕಾರ ನಡೆಯುತ್ತೇನೆ. ಪಕ್ಷದಲ್ಲಿ ನನಗೆ ಕಷ್ಟ ಎನಿಸಿದರೆ, ಮುಂದೆ ಚಿಂತನೆ ಮಾಡುವೆ ಎಂದರು. ಚುನಾವಣೆ ಎಂದಾಕ್ಷಣ ಎಲ್ಲರಿಗೂ ಕಷ್ಟವೇ. ಒತ್ತಡ ಇರುವುದು ಸಾಮಾನ್ಯ. ನಾನು ಗೆದ್ದ ಬಳಿಕ 6 ವರ್ಷ ಶಿಕ್ಷಕರಿಗಾಗಿ ಕೆಲಸ ಮಾಡುವೆ. ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವೆ. ನನ್ನ ಗೆಲವು ಖಚಿತ, ಮೇ.26ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.