ಹೊಸ ದಿಗಂತ ವರದಿ, ವಿಜಯಪುರ:
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಹಗಲುಗನಸು ಕಾಣುತ್ತಿದೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಅನ್ನುತ್ತಾರೆ. ಡಿ.ಕೆ.ಶಿವಕುಮಾರ ಈ ಸಾರಿ ಕೊಡದಿದ್ದರೇ ನೋಡುವೆ ಎನ್ನುತ್ತಾರೆ. ಖರ್ಗೆ, ಪರಮೇಶ್ವರ ದಲಿತರಿಗೆ ಅವಕಾಶ ಕೊಡಿ ಎಂದು ಬೇರೆ ಮೂಲಗಳಿಂದ ಕೂಗು ಹಾಕಿಸುತ್ತಿದ್ದಾರೆ ಎಂದರು.
ಮತ್ತೆ 2023 ರಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ. ನೀತಿ, ನಿಯತ್ತು, ನೇತೃತ್ವ ಬಿಜೆಪಿಯಲ್ಲಿದೆ. ಹೀಗಾಗಿ ಜನ ಬಿಜೆಪಿಗೆ ಬೆಂಬಲಿಸುತ್ತಾರೆ. ಭ್ರಷ್ಟಾಚಾರ ಬಿತ್ತಿ ಬೆಳೆಸಿ ಹೆಮ್ಮರವಾಗಿ ಮಾಡಿದ್ದು, ಕಾಂಗ್ರೆಸ್ ಪಕ್ಷ ಎಂದರು.
ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುಧ್ಧ ಆರೋಪ ನಿರಾಧಾರ ಬಗ್ಗೆ ಪ್ರತಿಕ್ರಿಯಿಸಿ, ಅದನ್ನು ನಾನು ಒಪ್ಪಲ್ಲ ಎಂದರು.
ಬೆಲೆ ಏರಿಕೆ ವಿಚಾರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆಯೇ ಎನ್ನುವ ಕುರಿತು ಪ್ರತಿಕ್ರಿಯಿಸಿ,
ರಷ್ಯಾ ಯುದ್ಧ, ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ಕಾರಣ ತಿಳಿದ ಯಾರೂ ಬಿಜೆಪಿಯನ್ನು ತಿರಸ್ಕರಿಸಲ್ಲ. ಬೆಲೆ ಏರಿಕೆ ನಿಯಂತ್ರಿಸಲು ಬಿಜೆಪಿ ಶ್ರಮಿಸುತ್ತಿದೆ. ಆತ್ಮ ನಿರ್ಭರದಂತಹ ಯೋಜನೆ ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.