ಹೊಸ ದಿಗಂತ ವರದಿ, ಮಡಿಕೇರಿ :
ದಂಪತಿ ಕಲಹ ಪತ್ನಿಯ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ವೀರಾಜಪೇಟೆ ತಾಲೂಕಿನ ಕಾಕೋಟುಪರಂಬು ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.
ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಜೇನು ಕುರುಬರ ಸುಮಿತ್ರಾ (25) ಪತಿ ಚೋಮಚ್ಚೀರ ಲವನಿಂದ ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಧ್ಯ ರಾತ್ರಿ ಕಬ್ಬಿಣದ ಸಲಾಕೆಯಿಂದ ಪತ್ನಿ ಮೇಲೆ ಹಲ್ಲೆ ಮಾಡಿ ಬೇರೆ ಕೋಣೆಯಲ್ಲಿ ನಿದ್ರಿಸಿದ್ದಾನೆ. ಬೆಳಗ್ಗೆ ತೋಟದ ಮಾಲಕರು ಲೈನ್ ಮನೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಇತರ ಕಾರ್ಮಿಕರ ಮೂಲಕ ಪರಿಶೀಲಿಸಿದಾಗ ಸುಮಿತ್ರಾ ಮೃತಪಟ್ಟಿರುವುದು ಕಂಡು ಬಂದಿದೆ. ಪಕ್ಕದ ಕೋಣೆಯಲ್ಲಿದ್ದ ಲವ ನಡೆದ ಘಟನೆಯನ್ನು ವಿವರಿಸಿ ತಪ್ಪೊಪ್ಪಿಕೊಂಡಿರುವುದಾಗಿ ಹೇಳಲಾಗಿದೆ.
ರಾತ್ರಿ ನಡೆದ ಕಲಹದ ಸಂದರ್ಭ ಪತ್ನಿ ಮಾತಿಗೆ ಮಾತು ಬೆಳೆಸಿದ್ದರಿಂದ ಹಲ್ಲೆ ಮಾಡಿರುವುದಾಗಿ ಹೇಳಿದ್ದಾನೆ. ಲವನನ್ನು ಪೊಲೀಸರು ಬಂಧಿಸಿದ್ದು, ಎರಡೂವರೆ ವರ್ಷದ ಪುತ್ರ ಹಾಗೂ 6 ತಿಂಗಳ ಪುತ್ರಿ ಅನಾಥರಾಗಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ವೀರಾಜಪೇಟೆ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ವೃತ್ತ ನೀರಿಕ್ಷಕ ಶಿವರುದ್ರಪ್ಪ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಸಿದ್ದಲಿಂಗ ಭಿ ಬಾಣಸೆ, ಅಪರಾಧ ವಿಭಾಗದ ಪಿ.ಎಸ್.ಐ. ಸಿ.ಬಿ.ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.