ಹೊಸ ದಿಗಂತ ವರದಿ, ಹಾವೇರಿ:
ಉಕ್ರೇನ್ನಲ್ಲಿ ಮಾರ್ಚ್ 1 ರಂದು ನವೀನ ಸಾವಿನ ಸುದ್ದಿ ಕೇಳಿ ದಿಗ್ಗಭ್ರಮೆಯಾಗಿದೆ. ದುರ್ದೈವಶಾತ ಶೆಲ್ ಸಾಳಿಯಲ್ಲಿ ಸಾವನ್ನಪಿದ್ದು ಅತ್ಯಂತ ದುಖಃದ ಸಂಗತಿಯಾಗಿದೆ. ಮೃತದೇಹವನ್ನು ತಾಯ್ನಾಡಿಗೆ ತರುವುದು ನಮ್ಮ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇತ್ತೀಚೆಗೆ ಉಕ್ರೇನ್ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಅವರ ಚಳಗೇರಿ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸರ್ಕಾರದಿಂದ ೨೫ ಲಕ್ಷಗಳ ರೂ ಸಹಾಯಧನ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಕೇಂದ್ರ ವಿದೇಶಾಂಗ ಸಚಿವ ಜೈಶಂಕರ ಅವರ ಜೊತೆ ಸತತ ಸಂಪರ್ಕದಲ್ಲಿದ್ದೇನೆ. ಮೃತ ನವೀನ ಪಾರ್ಥಿವ ಶರೀರವನ್ನು ಮರ್ಚೂರಿಯಲ್ಲಿ ಇಡಲಾಗಿದೆ. ಅಲ್ಲಿ ಬಾಂಬಿಂಗ್ ಇರುವ ಕಾರಣ ಹೊರತೆಗೆಯಲು ಆಗುತ್ತಿಲ್ಲ. ಇಂದು ಯುದ್ಧ ವಿರಾಮ ಆಗಿರುವುದರಿಂದ ಒಂದು ಅವಕಾಶ ಸಿಕ್ಕಂತಾಗಿದೆ. ಯುದ್ಧ ನಿಲ್ಲಲಿ ಎಂದು ಪ್ರಾರ್ಥಿಸುತ್ತೇನೆ. ಆದಷ್ಟು ಬೇಗನೇ ಪಾರ್ಥಿವ ಶರೀರ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಮೃತ ನವೀನ್ ಸಹೋದರನಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಉಕ್ರೇನ್ನಲ್ಲಿ ಬಹಳ ಜನರು ಸಿಲುಕಿಕೊಂಡಿದ್ದಾರೆ, 30 ರಿಂದ 40 ಕಿ.ಮೀ. ನಡೆದುಕೊಂಡು ಸುರಕ್ಷಿತ ಸ್ಥಗಳಿಗೆ ಬಂದಿದ್ದಾರೆ. ಎಲ್ಲರನ್ನು ತಾಯ್ನಾಡಿಗೆ ಕರೆತರುವ ಕೆಲಸಮಾಡಲಾಗುವುದು. ಜಿಲ್ಲೆಯ 10 ವಿದ್ಯಾರ್ಥಿಗಳಲ್ಲಿ ಈಗಾಗಲೇ ಐದು ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಉಳಿದ ಐದು ಜನರನ್ನು ಕರೆತರಬೇಕಾಗಿದೆ ಎಂದರು.
ಮೆರಿಟ್ ಇದ್ದರೂ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶವಿಲ್ಲದಿರುವುದನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿ ಚರ್ಚೆ ನಡೆಸಿದೆ. ನಾವು ಸಹ ವೈದ್ಯಕೀಯ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗೊಂದಿಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ್ ಪೂಜಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣವರ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ ಶಂಕರ ಇತರರು ಉಪಸ್ಥಿತರಿದ್ದರು.