ದಿಗಂತ ವರದಿ ಕಾಸರಗೋಡು:
ಇತಿಹಾಸ ಪ್ರಸಿದ್ಧ ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೋತ್ಸವವನ್ನು ಭಾನುವಾರ ಸಂಜೆ ಶುಭಗಳಿಗೆಯಲ್ಲಿ ಉದ್ಘಾಟಿಸಲಾಯಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮತ್ತು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪಬೆಳಗಿಸಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅನುಗ್ರಹ ಭಾಷಣ ಮಾಡಿದರು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಯು.ಟಿ.ಆಳ್ವ , ಡಾ.ಬಿ.ಎಸ್.ರಾವ್, ಜಯದೇವ ಖಂಡಿಗೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲ ದಿನ ಅಣಂಗೂರು ಶ್ರೀ ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ವೃಂದದವರು ಭಜನಾ ಸೇವೆ ನಡೆಸಿದರು. 48 ದಿನಗಳ ಈ ಭಜನಾ ಸಂಕೀರ್ತನಾ ಮಂಡಲೋತ್ಸವವು ಮಧೂರು ದೇವಾಲಯದ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ನೆರವೇರುತ್ತಿದೆ.