ಅಗಲ್ಪಾಡಿ ಮಾರ್ಪನಡ್ಕದಲ್ಲಿ ಪಾಂಚಜನ್ಯ ಬಾಲಗೋಕುಲ ಉದ್ಘಾಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ಮಹತ್ತರವಾದ ಜವಾಬ್ದಾರಿ ನಮ್ಮ ಮುಂದಿದೆ ಎಂಬುದನ್ನು ಪ್ರತೀ ಮನೆಯ ಹಿರಿಯರೂ ಅರ್ಥಮಾಡಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಲಭಿಸಬೇಕಿದೆ. ಪಾಂಚಜನ್ಯವೆಂಬ ಈ ಸಭಾಭವನವು ಕೇವಲ ಸಮಾರಂಭಗಳಿಗಾಗಿ ಸೀಮಿತವಾಗಿರದೆ ಉತ್ತಮ ಪ್ರಜೆಗಳ ನಿರ್ಮಾಣಕ್ಕಾಗಿಯೂ ತೆರೆದುಕೊಂಡು ಪರಿಪೂರ್ಣತೆಯನ್ನು ಹೊಂದಿದೆ. ಮುಂದಿನ ಪೀಳಿಗೆಗೆ ಪುರಾಣ ಗ್ರಂಥಗಳ ಕುರಿತಾದ ಅರಿವನ್ನು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಧಾರ್ಮಿಕ ಮುಂದಾಳು ಮಧುಸೂದನ್ ಆಯರ್ ಮಂಗಳೂರು ಅಭಿಪ್ರಾಯಪಟ್ಟರು.

ಕುಂಬ್ಡಾಜೆ ಅಗಲ್ಪಾಡಿ ಜಯನಗರ ಪಾಂಚಜನ್ಯ ಸಭಾಭವನದಲ್ಲಿ ಭಾನುವಾರ ಬೆಳಗ್ಗೆ ಪಾಂಚಜನ್ಯ ಬಾಲಗೋಕುಲವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಮಾರಂಭಗಳು, ನಮ್ಮ ಉತ್ಸವಗಳ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯಕ್ಕೆ ಪೂರಕವಾಗಿ ನಾವು ನಡೆದುಕೊಳ್ಳಬೇಕು. ಸಂಸ್ಕೃತಿಯ ಪುನರುತ್ಥಾನಕ್ಕೆ ರಾಮಾಯಣ, ಮಹಾಭಾರತ ಮೊದಲಾದ ಗ್ರಂಥಗಳನ್ನು ಮನನಮಾಡಿಕೊಳ್ಳುವತ್ತ ನಾವು ಸಾಗಬೇಕಾಗಿದೆ ಎಂದರು.

ಬಾಲಗೋಕುಲ ಕಾಸರಗೋಡು ತಾಲೂಕು ಸಂಪರ್ಕ ಪ್ರಮುಖ್ ಶಂಕರನಾರಾಯಣ ಭಟ್ ಮಾತನಾಡುತ್ತಾ ಅದೆಷ್ಟೋ ವಿದೇಶೀಯರು ಆಕ್ರಮಣವನ್ನು ಮಾಡಿದರೂ ಭಾರತವು ಇಂದೂ ಕೂಡ ಹಿಂದು ಬಹುಸಂಖ್ಯಾತರಿರುವ ದೇಶವಾಗಿ ಉಳಿದುಕೊಂಡಿದೆ. ದೇವಋಣ, ಋಷಿಋಣ, ಪಿತೃಋಣಕ್ಕೆ ನಾವು ಬದ್ಧರಾಗಿರಬೇಕು. ನಮ್ಮ ಸಂತತಿ ಪರಂಪರಾಗತವಾಗಿ ಮುಂದುವರಿಯಬೇಕು ಮಾತ್ರವಲ್ಲದೆ ಮುಂದಿನ ಪೀಳಿಗೆಯನ್ನು ಯಾವರೀತಿ ಬೆಳೆಸಬೇಕು, ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ನಾವು ಅರಿತಿರಬೇಕು. ಕುಟುಂಬದ ಯೋಗ್ಯತೆಯನ್ನು ಉಳಿಸಿ ಬೆಳೆಸಿಕೊಳ್ಳುವ ಗುಣಸ್ವಭಾವ ಮಕ್ಕಳಲ್ಲಿ ಇರಬೇಕು ಎಂದರು.

ಕುದ್ಕುಳಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಮೊಕ್ತೇಸರ ಜಯರಾಜ್ ಕುಣಿಕುಳ್ಳಾಯ ಪಾರೆಗದ್ದೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲೆಯ ಬಾಲಗೋಕುಲದ ಪ್ರಮುಖರು ಪಾಲ್ಗೊಂಡಿದ್ದರು. ಪಾಂಚಜನ್ಯ ಬಾಲಗೋಕುಲ ಪ್ರಮುಖ್ ಶ್ರೀಧರ ಪದ್ಮಾರು ಸ್ವಾಗತಿಸಿ, ಬಾಲಗೋಕುಲದ ಶಿಕ್ಷಕಿ ಲಾವಣ್ಯ ಗಿರೀಶ್ ಧನ್ಯವಾದ ಸಮರ್ಪಿಸಿದರು. ಕಾರ್ಯಕಾರೀ ಸದಸ್ಯ ರಮೇಶ್ ಕೃಷ್ಣ ಪದ್ಮಾರು ನಿರೂಪಿಸಿದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ, ಯಾದವಸೇವಾ ಸಂಘದ ಅಧ್ಯಕ್ಷ ಸುಧಾಮ ಪದ್ಮಾರು ಹಾಗೂ ಊರ ಮಹನೀಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!