ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೊ ರೈಲು ಟಿಕೆಟ್ ದರ ಏರಿಕೆ ಮಾಡಿದರೆ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದ ಪ್ರಯಾಣಿಕರಿಗೆ ಭಾರಿ ಹೊರೆಯಾಗಲಿದೆ. ಹಾಗಾಗಿ ದರ ಏರಿಸುವ ಪ್ರಸ್ತಾವದ ಬಗ್ಗೆ ಮರು ಚಿಂತನೆ ನಡೆಸಬೇಕು ಎಂದು ಸಂಸದ ಪಿ.ಸಿ. ಮೋಹನ್ ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಏಷ್ಯಾದಲ್ಲಿಯೇ ಬೆಂಗಳೂರು ಅತಿ ವಾಹನ ದಟ್ಟಣೆಯನ್ನು ಹೊಂದಿರುವ ನಗರ. ಅದಕ್ಕಾಗಿ ಜನರು ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮಾಡುವುದು ಅಗತ್ಯ. ಇಂಥ ಸಂದರ್ಭದಲ್ಲಿ ಇತ್ತೀಚೆಗೆ ಬಸ್ ಟಿಕೆಟ್ ದರ ಏರಿಸಲಾಗಿದೆ. ಇದೀಗ ಮೆಟ್ರೊ ಕೂಡ ದರ ಏರಿಕೆ ಮಾಡಿದರೆ ಜನರು ತಮ್ಮ ವಯಕ್ತಿಕ ವಾಹನಗಳನ್ನು ಬಳಸಲು ಮುಂದಾಗುತ್ತಾರೆ, ಇದರಿಂದಾಗಿ ಮಾಲಿನ್ಯ ಹೆಚ್ಚುತ್ತದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ. ಅದಕ್ಕಾಗಿ ಬಿಎಂಆರ್ಸಿಎಲ್ ಪ್ರಯಾಣೇತರ ವರಮಾನವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಯಾಣಿಕರಿಗೆ ಹೊರೆಯಾಗದಂತೆ ಕಾರ್ಯಾಚರಣೆಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಜಾಹೀರಾತು, ಚಿಲ್ಲರೆ ಸ್ಥಳಗಳು ಮತ್ತು ಪಾರ್ಕಿಂಗ್ ಸೌಲಭ್ಯಗಳ ಸಮರ್ಥ ನಿರ್ವಹಣೆಯಂತಹ ಶುಲ್ಕರಹಿತ ಆದಾಯ ಮಾದರಿಗಳನ್ನು ಅನ್ವೇಷಿಸಲು ಬಿಎಮ್ಆರ್ಸಿಎಲ್ಗೆ ಮೋಹನ್ ಸಲಹೆ ನೀಡಿದ್ದಾರೆ.