ಹೊಸದಿಗಂತ ವರದಿ, ಬೀದರ್ :
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರ ನೇತೃತ್ವದಲ್ಲಿ ಆಗಸ್ಟ್ 10ರಂದು ಔರಾದ ಪಟ್ಟಣದಲ್ಲಿ ಒಂದು ಸಾವಿರ ಮೀಟರ್ ಅಳತೆಯ ತಿರಂಗಾ ಯಾತ್ರೆ ಭವ್ಯ ಜರುಗಿತು.
ಸುಕ್ಷೇತ್ರ ಅಮರೇಶ್ವರ ದೇವಸ್ಥಾನದ ಅಗ್ನಿಕುಂಡದ ಬಳಿ ತ್ರಿವರ್ಣ ಧ್ವಜ ಹಾರಿಸಿ, ಧ್ವಜಗಳನ್ನು ವಿತರಿಸುವ ಮೂಲಕ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ತಾವೂ ಕಾಲ್ನಡಿಗೆಯಲ್ಲಿ ಸಾಗಿ ರಾಷ್ಟೀಧ್ವಜ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು. ತಿರಂಗಾ ಯಾತ್ರೆಯು ಅಮರೇಶ್ವರ ದೇವಸ್ಥಾನದ ಅಗ್ನಿಕುಂಡದಿಂದ ಹೊರಟು, ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣದ ಮಾರ್ಗವಾಗಿ ಅಮರೇಶ್ವರ ಮಹಾವಿದ್ಯಾಲಯದವರೆಗೆ ಸಾಗಿ ಕೊನೆಗೊಂಡಿತು.
ಔರಾದ ಪಟ್ಟಣದ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 5 ಸಾವಿರ ಜನತೆ ಪಾಲ್ಗೊಂಡಿದ್ದ ಯಾತ್ರೆಯಲ್ಲಿ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟೀಧ್ವಜಗಳನ್ನು ಹಿಡಿದು ‘ಭಾರತ ಮಾತಾಕಿ ಜೈ’, ‘ವಂದೇ ಮಾತರಂ’ ಎನ್ನುವ ಘೋಷಣೆಗಳು ಕೂಗುವ ಮೂಲಕ ದೇಶಭಕ್ತಿಯನ್ನು ಮೆರೆದರು. ದೇಶಭಕ್ತಿ ಗೀತೆಗಳ ಮೇಲೆ ಯುವಕರು ಹೆಜ್ಜೆ ಹಾಕಿ ತಿರಂಗಾ ಯಾತ್ರೆಗೆ ಮೆರಗು ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಅಸಂಖ್ಯಾತ ತ್ಯಾಗ ಬಲಿದಾನಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ತ್ರೋಸ್ಸವ ಲಭಿಸಿದೆ. ಪರಕೀಯರ ಸಂಕೋಲೆಯಿಂದ ಮುಕ್ತಿಪಡೆದು ಸ್ವಾತಂತ್ರ್ಯ ಭಾರತವಾಗಿ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಎಂಬ ಅದ್ಭುತ ಅಭಿಯಾನವನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.