ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 500 ವರ್ಷಗಳ ನಂತರ ಕೋಟ್ಯಂತರ ರಾಮಭಕ್ತರ ಕನಸು ನನಸಾಗಿದೆ.
ಪುಣ್ಯಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದಲ್ಲಿ ಶ್ರೀರಾಮಲಲಾ ಪ್ರಾಣಪ್ರತಿಷ್ಠೆ ಕಾರ್ಯ ಸಂಪನ್ನವಾಗಿದೆ. ಶಿಲೆಯು ದೇವರಾಗುವ ಕ್ಷಣಗಳನ್ನು ಗಣ್ಯರು, ಭಕ್ತರು ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ.
ಒಟ್ಟಾರೆ 50 ನಿಮಿಷಗಳ ಕಾಲ ನಡೆಯುವ ಪ್ರಾಣಪ್ರತಿಷ್ಠೆ ವಿಧಿವಿಧಾನಗಳಲ್ಲಿ ಪ್ರಧಾನಿ ಮೋದಿ ಯಜಮಾನರಾಗಿ ಎಲ್ಲ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ ಸೇರಿ ಐವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಇಡೀ ರಾಮನೂರು ಕೇಸರಿಮಯವಾಗಿದ್ದು, ರಾಮನು ಎಲ್ಲೆಡೆ ರಾರಾಜಿಸುತ್ತಿದ್ದಾನೆ. ಎಲ್ಲರ ಹೃದಯದಲ್ಲಿಯೂ ರಾಮ ನೆಲೆಸಿದ್ದು, ನಾಲಿಗೆಯಲ್ಲಿ ರಾಮನಾಪ ಜಪಿಸಲಾಗುತ್ತಿದೆ. ಗರ್ಭಗುಡಿಯಲ್ಲಿ ನೆಲೆಸಿರುವ ಕೃಷ್ಣಶಿಲೆಯಿಂದ ತಯಾರಾದ ರಾಮಲಲಾ ಮೂರ್ತಿಗೆ 84 ಸೆಕೆಂಡುಗಳನ್ನು ಪ್ರಾಣಪ್ರತಿಷ್ಠೆ ಮಾಡಲಾಗಿದೆ.
ಶಿಲೆಗೆ ಜೀವ ತುಂಬುವ ಪ್ರಕ್ರಿಯೆ ಕಾಣಲು 70 ಸಾವಿರಕ್ಕೂ ಹೆಚ್ಚು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ವೇದ ಪಠಣಗಳ ನಂತರ ದೇವರನ್ನು ವಿಗ್ರಹದೊಳಗೆ ಆವಾಹನೆ ಮಾಡಲಾಗಿದ್ದು,ಚಿನ್ನದ ಸೂಜಿಯಿಂದ ಭಗವಂತನ ಕಣ್ಣನ್ನು ತೆರೆಯಲಾಗಿದೆ. ಕಣ್ತೆರೆದ ರಾಮನಿಗೆ ಕನ್ನಡಿ, ಹಸು ನಂತರ ಹಣ್ಣು ಹಂಪಲನ್ನು ತೋರಿಸಿ ನೈವೇದ್ಯ ಮಾಡಲಾಗಿದೆ. ಇಲ್ಲಿಗೆ ಪ್ರಾಣಪ್ರತಿಷ್ಠೆ ಸಂಪನ್ನವಾಗಿದೆ.