July 23, 2026
Thursday, July 23, 2026
spot_img

ಮ್ಯಾಂಚೆಸ್ಟರ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಭಾರತ: 3ನೇ ಟಿ20 ಪಂದ್ಯಕ್ಕೆ ವೇಗದ ಅಸ್ತ್ರ ಪ್ರಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರಾಸೆ ಅನುಭವಿಸಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ಭಾರತದ ಪ್ರಮುಖ ಸ್ಪಿನ್ನರ್ ರವಿ ಬಿಷ್ಣೋಯ್ ಅವರ ದುಬಾರಿ ಬೌಲಿಂಗ್. ತಮ್ಮ 4 ಓವರ್‌ಗಳ ಕೋಟಾದಲ್ಲಿ ಬರೋಬ್ಬರಿ 60 ರನ್ ಬಿಟ್ಟುಕೊಟ್ಟ ಬಿಷ್ಣೋಯ್, ಪಂದ್ಯದ ನಿರ್ಣಾಯಕ ಹಂತದಲ್ಲೇ 29 ರನ್ ನೀಡಿ ಇಂಗ್ಲೆಂಡ್ ಗೆಲುವಿಗೆ ದಾರಿ ಮಾಡಿಕೊಟ್ಟರು. ಹೀಗಾಗಿ ಸರಣಿಯಲ್ಲಿ ಕಮಬ್ಯಾಕ್ ಮಾಡಲು ಭಾರತ ತಂಡ ಈಗ ತಂತ್ರ ಬದಲಾಯಿಸಿದೆ.

ಟ್ರೆಂಟ್ ಬ್ರಿಡ್ಜ್‌ನಲ್ಲಿ ಹೆಚ್ಚುವರಿ ಪೇಸ್ ಅಸ್ತ್ರ?

ನಾಳೆ (ಜುಲೈ 7) ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ 3ನೇ ಟಿ20 ಪಂದ್ಯ ಜರುಗಲಿದ್ದು, ಭಾರತ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ. ಸ್ಪಿನ್ ವಿಭಾಗದಲ್ಲಿ ರನ್ ಮಳೆ ಹರಿಸಿದ ಬಿಷ್ಣೋಯ್ ಅವರನ್ನು ಕೈಬಿಟ್ಟು, ಪಿಚ್ ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ವೇಗದ ಬೌಲರ್ ಅನ್ನು ಕಣಕ್ಕಿಳಿಸಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಇದರಂತೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅಥವಾ ಯುವ ಪೇಸರ್ ಪ್ರಿನ್ಸ್ ಯಾದವ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ಭಾರತದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ

ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಅಬ್ಬರದ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತೊಮ್ಮೆ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ತಿಲಕ್ ವರ್ಮಾ ಜವಾಬ್ದಾರಿ ಹೊರಲಿದ್ದಾರೆ. ಇನ್ನು ಆಲ್‌ರೌಂಡರ್‌ಗಳಾಗಿ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ತಂಡಕ್ಕೆ ಬಲ ತುಂಬಲಿದ್ದಾರೆ. ಗೆಲುವಿನ ಹಳಿಗೆ ಮರಳಲು ಟೀಮ್ ಇಂಡಿಯಾ ಸಂಪೂರ್ಣ ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !