ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿನ ಬೇಗೆಗೆ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನಿಂದ ಮುಕ್ತಿ ಪಡೆಯಲು ಎಸಿ, ಕೂಲರ್, ಫ್ರಿಜ್, ಫ್ಯಾನ್ ಇತ್ಯಾದಿಗಳ ಬಳಕೆ ಹೆಚ್ಚಾಗಿದೆ. ಇದು ವಿದ್ಯುತ್ ಬೇಡಿಕೆಯಲ್ಲಿ ಅನಿರೀಕ್ಷಿತ ಏರಿಕೆಗೆ ಕಾರಣವಾಗಿದೆ. ಇದೀಗ ಬೇಡಿಕೆಯನ್ನು ಪೂರೈಸಲು ಕಲ್ಲಿದ್ದಲು ಕೊರತೆ ಉಂಟಾಗಿದ್ದು ಕಲ್ಲಿದ್ದಲು ಅವಲಂಬಿತ ವಲಯಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ವಿದ್ಯುತ್ ಸಮಸ್ಯೆ ನೀಗಿಸಲು ಕಲ್ಲಿದ್ದಲು ಪೂರೈಕೆಯನ್ನು ತ್ವರಿತಗೊಳಿಸಲು ರೈಲ್ವೆ ಇಲಾಖೆ 650 ರೈಲುಗಳನ್ನು ರದ್ದುಗೊಳಿಸಿದೆ. ವಿದ್ಯುತ್ ಸ್ಥಾವರಗಳಿಗೆ ನಿಯಮಿತವಾಗಿ ಕಲ್ಲಿದ್ದಲು ಪೂರೈಕೆಗಾಗಿ ಮೇ 24 ರವರೆಗೆ ಹಲವಾರು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗುವುದು ಎಂದು ರೈಲ್ವೆ ಸಚಿವಾಲಯ ಪ್ರಕಟಿಸಿದೆ. ರೈಲ್ವೆ ಸಚಿವಾಲಯ ಮತ್ತು ವಿದ್ಯುತ್ ಸಚಿವಾಲಯಗಳ ನಡುವೆ ಜಂಟಿ ಸಭೆ ನಡೆಸಿ, ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಪ್ರತಿದಿನ 422 ಕಲ್ಲಿದ್ದಲು ಸಾಗಾಟ ರೈಲುಗಳನ್ನು ಓಡಿಸಲು ರೈಲ್ವೆ ವಿನಂತಿಸಿದೆ. ಈ ಸಂಖ್ಯೆ 410 ದಾಟುವಂತೆ ಕಾಣುತ್ತಿಲ್ಲ. ಪ್ರತಿ ರೇಕ್ನಿಂದ ಗಾಡಿಯಲಿ 3,500 ಟನ್ ಕಲ್ಲಿದ್ದಲು ಸರಬರಾಜು ಮಾಡಬಹುದು ಎಂದು ವರದಿಯಾಗಿದೆ.
ಕಲ್ಲಿದ್ದಲು ಬೇಡಿಕೆಯಲ್ಲಿ ಹಠಾತ್ ಹೆಚ್ಚಳದಿಂದಾಗಿ, ಕಲ್ಲಿದ್ದಲು ಸಾಗಿಸಲು ಕಳೆದ ಎರಡು ವಾರಗಳಿಂದ ಪ್ರತಿದಿನ ಸುಮಾರು 16 ಮೇಲ್ / ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಬೇಕಾಗಿದೆ. ಪ್ರಸ್ತುತ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ನಿಕ್ಷೇಪವನ್ನು ಸುಧಾರಿಸಲು ಸುಮಾರು ಎರಡು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಭಾರತದ ವಿದ್ಯುತ್ ಪೂರೈಕೆಯ ಸುಮಾರು 70 ಪ್ರತಿಶತ ಕಲ್ಲಿದ್ದಲಿನಿಂದ ಬರುತ್ತದೆ. ಮುಂದಿನ ದಿನಗಳಲ್ಲಿ ಈ ಬಿಕ್ಕಟ್ಟು ಹೇಗೆ ನಿವಾರಣೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.