ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇತರೆ ದೇಶಗಳಿಗೆ ಮಾದರಿ : ಆರಗ ಜ್ಞಾನೇಂದ್ರ

ಹೊಸದಿಗಂತ ವರದಿ ತುಮಕೂರು:

ಶ್ರೀ ಸಾಮಾನ್ಯನಿಗೂ, ಶ್ರೀಮಂತನಿಗೂ ಸರಿಸಮನಾದ ಹಕ್ಕುಗಳು ದೊರೆಯುವಂತೆ ನಮ್ಮ ಸಂವಿಧಾನವನ್ನು ರೂಪಿಸಲಾಗಿದ್ದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇತರೆ ದೇಶಗಳಿಗೆ ಮಾದರಿಯಾಗಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ಮಾಡಿ ಮಾತನಾಡಿದ ಅವರು ಸ್ವತಂತ್ರ ಭಾರತದ ಇತಿಹಾಸದಲ್ಲಿ 26 ಜನವರಿ 1950 ಭಾರತೀಯರಾದ ನಾವೆಲ್ಲರೂ ಅತ್ಯಂತ ಹೆಮ್ಮೆ ಪಡುವಂತಹ ದಿನ. ಶತ ಶತಮಾನಗಳ ಸ್ವಾತಂತ್ರ್ಯದ ಕನಸು ಪರಿಪೂರ್ಣವಾಗಿ ಸಾಕಾರಗೊಂಡ ದಿನ. ಭಾರತ ಸರ್ವತಂತ್ರ ಸ್ವತಂತ್ರವಾದ ದಿನ. ಭಾರತೀಯರ ಸ್ವಾತಂತ್ರ್ಯದ ಕನಸನ್ನು ನನಸಾಗಿಸಿ ಅವರ ಹಕ್ಕು ಮತ್ತು ಕರ್ತವ್ಯಗಳನ್ನು ಮಾನವೀಯ ಮೌಲ್ಯಗಳೊಂದಿಗೆ ಭಾರತೀಯರೆಲ್ಲರಿಗೂ ಸರ್ವಸಮ್ಮತವಾಗುವಂತೆ ರೂಪಿಸಿ, ಸಂವಿಧಾನದ ರೂಪದಲ್ಲಿ ಜಾರಿಗೊಳಿಸಿ ತಮಗೆ ತಾವು ಅರ್ಪಿಸಿಕೊಂಡ ದಿನವಾಗಿದೆ ಎಂದರು.

395 ವಿಧಿಗಳು, 8 ಅನುಸೂಚಿಗಳು ಹಾಗೂ 22 ಅಧ್ಯಾಯಗಳನ್ನೊಳಗೊಂಡ ಭಾರತದ ಸಂವಿಧಾನವು 1950 ಜನವರಿ 26 ರಂದು ಜಾರಿಗೆ ಬಂದಿತು. ಇದೇ ದಿನವನ್ನು ಪ್ರತಿವರ್ಷ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂತಹ ಮಹಾನ್ ಆಶಯವನ್ನು ಹೊಂದಿರುವ ಬೃಹತ್ ಸಂವಿಧಾನವನ್ನು ರೂಪಿಸಿಕೊಟ್ಟ ಭಾರತ ರತ್ನ ಡಾ: ಬಿ. ಆರ್. ಅಂಬೇಡ್ಕರ್ ರವರ ಕಾರ್ಯ ಚಿರಸ್ಮರಣೀಯ ಎಂದರು.

ಸಂವಿಧಾನ ರಚನಾಕಾರರಲ್ಲಿ ಒಬ್ಬರಾದ ಕರ್ನಾಟಕದ ಹೆಮ್ಮೆಯ ಪುತ್ರ ಬೆನಗಲ್ ನರಸಿಂಹರಾವ್ ಅವರು ಕೂಡಾ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನಕ್ಕೆ ಸೇರಿಸಿದ್ದಾರೆ. ಪ್ರಪಂಚದ ಹಲವಾರು ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತೀಯ ಸಮಾಜಕ್ಕೆ ಪೂರಕವಾಗುವ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಆಳವಡಿಸಿಕೊಳ್ಳಲಾಗಿದೆ.

ಆಡಳಿತದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಗಳಿಗೆ ಜವಾಬ್ದಾರಿಗಳನ್ನು ಸಂವಿಧಾನದಲ್ಲಿ ನಿಖರವಾಗಿ ಗುರುತಿಸಲಾಗಿದೆ. ಭಾರತ ಸಂವಿಧಾನದ ರಚನೆಗೆ ಕಾಣಿಕೆ ನೀಡಿದ ರಾಜಕೀಯ ಧುರೀಣರು, ರಾಷ್ಟ್ರ ಚಿಂತಕರು, ಪ್ರಜ್ಞಾವಂತರು ಮತ್ತು ಬುದ್ದಿ ಜೀವಿಗಳನ್ನು ನಾವು ಈ ಸಂದರ್ಭದಲ್ಲಿ ಅತ್ಯಂತ ಗೌರವದಿಂದ ಸ್ಮರಿಸಬೇಕಿದೆ.

ವಿವಿಧತೆಯಲ್ಲಿ ಏಕತೆ, ವೈವಿಧ್ಯಮಯ ಸಂಸ್ಕೃತಿ, ಶ್ರೀಮಂತ ಇತಿಹಾಸವು ಸಮಗ್ರ ಭಾರತದ ಪರಿಕಲ್ಪನೆಯ ಅಡಿಪಾಯಗಳಾಗಿವೆ. ಶಾಂತಿ, ಅಹಿಂಸೆ,ಸಮಾನತೆ, ಸಹಬಾಳ್ವೆ ಮತ್ತು ಸರ್ವಧರ್ಮ ಸಹಿಷ್ಣುತೆ ನಮ್ಮ ಗಂತಂತ್ರ ವ್ಯವಸ್ಥೆಯ ಮೂಲ ಆಶಯವಾಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಇದರ ಮೂಲ ತತ್ವವಾಗಿದೆ.

ಕೃಷಿ ನೀರಾವರಿ ಅಭಿವೃದ್ದಿಯ ಜೊತೆಗೆ ರಾಜ್ಯದ ಒದ್ಯೋಗಿಕರಣ ಹಾದಿಯನ್ನು ಸುಗಮಗೊಳಿಸಲು ರಸ್ತೆ ಮತ್ತು ಸಂಪರ್ಕ ಜಾಲಗಳ ಅಭಿವೃಧ್ದಿ, ರೈಲ್ವೆ ಮಾರ್ಗಗಳ ಅಭಿವೃಧ್ದಿ, ಬಂದರುಗಳು ಹಾಗೂ ವಿಮಾನ ನಿಲ್ದಾಣಗಳ ನಿರ್ಮಾಣ, ಕೈಗಾರಿಕಾ ಕ್ಷೇತ್ರಗಳ ನಿರ್ಮಾಣ ಮುಂತಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರವು ವಿಶೇಷ ಗಮನ ಹರಿಸಿದೆ.

ಶೈಕ್ಷಣಿಕ, ಸಾಂಸ್ಕೃತಿಕ, ವಾಣಿಜ್ಯ ಹಾಗೂ ಕೈಗಾರಿಕಾ ವಲಯದಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ವೇಗವಾಗಿ ಬೆಳೆಯುತ್ತಿರುವ ತುಮಕೂರಿನಲ್ಲಿ ಹೆಚ್ಚು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಬೆಂಗಳೂರಿನ ಮೇಲಿರುವ ಒತ್ತಡವನ್ನು ತಗ್ಗಿಸುವ ಸಲುವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ 25 ಸೆಪ್ಟೆಂಬರ್ 2021 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 99 ಕೋಟಿ ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳುಳ್ಳ peripheral cancer ಕೇಂದ್ರವನ್ನು ನಿರ್ಮಿಸಲು ಶಂಕು ಸ್ಥಾಪನೆ ಮಾಡಿದ್ದಾರೆ.

ಅಲ್ಲದೆ, 20ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳುಳ್ಳ ತಾಯಿ ಮಕ್ಕಳ ಆಸ್ಪತ್ರೆ ಹಾಗೂ 50ಲಕ್ಷ ವೆಚ್ಚದಲ್ಲಿ 10 ಹಾಡಿಗೆಗಳುಲ್ಲ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಪಾಪನೆ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಮಾನ್ಯ ಸಂಸದರು ಹಾಗೂ ಶಾಸಕರ ಸ್ಥಳೀಯ ಅಭಿವೃಧ್ದಿ ನಿಧಿಯಿಂದ 1.5 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯದ ಉನ್ನತೀಕರಣ ಕಾಮಗಾರಿ ಪ್ರಗತಿಯಲ್ಲಿದೆ.

ರಾಜ್ಯ ಸರ್ಕಾರದಿಂದ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ 10 ನಮ್ಮ ಕ್ಲಿನಿಕ್ ಗಳನ್ನೂ ತೆರೆಯಲು ಅನುಮೋದನೆ ನೀಡಲಾಗಿದ್ದು, ಮರಳುರು ದಿನ್ನೆ, ಮೇಳೆಕೋಟೆ , ಮಧುಗಿರಿ, ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿ ಯಲ್ಲಿ ತಲಾ ಒಂದು ನಮ್ಮ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿವೆ. ಜಯಪುರ, ದೇವರಾಯಪಟ್ಟಣ, ದಿಬ್ಬುರು, ಸತ್ಯಮಂಗಲ ಹಾಗೂ ಬಿದಿರುಮಳೆ ತೋಟ ಈ 5 ನಗರಗಳಲ್ಲಿ ಶೀಘ್ರವಾಗಿ ಪ್ರಾರಂಭವಾಗಲಿದ್ದು ಜನರ ಸೇವೆಗೆ ಲಭ್ಯವಾಗಲಿದೆ. ಜೆ.ಇ. ಲಸಿಕಾ ಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಶೇ 96ರಷ್ಟು ಸಾಧನೆಯನ್ನು ಮಾಡಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!