ಹೊಸದಿಗಂತ ವರದಿ, ಕಲಬುರಗಿ:
ವಿಶ್ವದ ಬಹುತೇಕ ದೇಶಗಳಲ್ಲಿ ರಾಜಕೀಯ ಅಸ್ಥಿತರತೆ, ಆರ್ಥಿಕ ಅಶಿಸ್ತಿನಿಂದ ಅಲ್ಲಿ ಅರಾಜಕತೆ ಸೃಷ್ಠಿಯಾಗಿದ್ದನ್ನು ಕಂಡಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನದ ಪರಿಣಾಮ ದೇಶದಲ್ಲಿ ಇಂತಹ ಸಮಸ್ಯೆ ಕಳೆದ 75 ವರ್ಷಗಳಲ್ಲಿ ಎಂದೂ ಕಂಡುಬಂದಿಲ್ಲ. ಇಂದು ಭಾರತವು ಪ್ರಗತಿಯ ಉತ್ತುಂಗದಲ್ಲಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯತೆ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ 30 ಕೋಟಿಯಿದ್ದ ಜನಸಂಖ್ಯೆ ಇಂದು 140 ಕೋಟಿ ದಾಟಿದೆ. ಸ್ವಾತಂತ್ರ್ಯ ಪೂರ್ವದಲ್ಲಿನ ಆಹಾರ ಸಮಸ್ಯೆ ಈಗಿಲ್ಲ. ತಲಾ ಆದಾಯ 259 ರೂ. ಗಳಿಂದ 1,12,835 ರೂ. ಗಳಿಗೆ ಏರಿಕೆಯಾಗಿದೆ ಎಂದರು.
ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ವಿಶ್ವದ ದೊಡ್ಡಣ್ಣ ಅಮೇರಿಕಾ ಪರಿಸ್ಥಿತಿ ನಿಭಾಯಿಸಲು ಆಗಲಿಲ್ಲ. ಆದರೆ ಭಾರತವು ಅದನ್ನು ಸಮರ್ಥವಾಗಿ ನಿಭಾಯಿಸಿದಲ್ಲದೆ ಇತರೆ ದೇಶಕ್ಕೆ ಕೋವಿಡ್ ಲಸಿಕೆ ನೀಡಿದೆ. ಒಟ್ಟಾರೆಯಾಗಿ ಭಾರತ ವಿಶ್ವ ಗುರುವಿನತ್ತ ಸಾಗಿದೆ. ಇದಕ್ಕೆ ಮೂಲ ಕಾರಣ ಸಂವಿಧಾನ ಎಂದ ಅವರು, ಪ್ರತೊಯೊಬ್ಬರು ತಮ್ಮ ಮನೆಯಲ್ಲಿ ಸಂವಿಧಾನ ಪ್ರಸ್ತಾವನೆ ತೂಗು ಹಾಕಿ, ಅದರ ಆಶಯದಂತೆ ನಡೆಯಬೇಕೆಂದರು.