ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಕುಟುಂಬದಿಂದ ಯುವಕನ ಅಂಗಾಂಗ ದಾನ

ಹೊಸದಿಗಂತ ವರದಿ, ಮಂಡ್ಯ :

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಕುಟುಂಬದವರು ಅಂಗಾಂಗಳನ್ನು ದಾನ ಮಾಡುವ ಮೂಲಕ ಅತೀವ ನೋವಿನಲ್ಲಿ ಮಾನವೀಯತೆ ಮೆರೆದಿದ್ದಾರೆ.
ಪಾಂಡವಪುರ ತಾಲೂಕಿನ ಸಿಂಗಾಪುರ ಗ್ರಾಮದ 22 ವರ್ಷದ ಸಚಿನ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಗಾಯಾಳುವಿನ ಮೆದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದರು.
ಮಗ ಬದುಕಿ ಉಳಿಯುವುದಿಲ್ಲ ಎಂಬುದು ತಿಳಿದ ಮೇಲೂ ಕುಟುಂಬದವರು ತಮ್ಮ ನೋವನ್ನು ತಾಳಿಕೊಂಡು ವೈದ್ಯರ ಸಲಹೆಯ ಮೇರೆಗೆ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದರು. ಹಲವು ರೋಗಿಗಳಿಗೆ ನೆರವಾಗುವ ಮೂಲಕ ಸಚಿನ್ ಜೀವಂತಗೊಳಿಸಿದರು.
ಜೆಎಸ್‌ಎಸ್ ಆಸ್ಪತ್ರೆಯ ವೈದ್ಯರು ಸಚಿನ್ ಅವರ ಹೃದಯ, ಕಿಡ್ನಿ, ನೇತ್ರಗಳನ್ನು ಪಡೆದರು. ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಹಸ್ತಾಂತರಿಸಿದರು. ಸಚಿನ್ ಕುಟುಂಬದವರಿಗೆ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಗೌರವ ಸಲ್ಲಿಸಿದರು.
ಲೇಬರ್ ಕಾಂಟ್ರಾಕ್ಟೃ್‌ ಮಾಲೀಕರಾಗಿದ್ದ ಸಚಿನ್ ನ.28ರಂದು ಕೆ.ಆರ್.ಪೇಟೆ ತಾಲೂಕು ಚಟ್ಟಂಗೆರೆ ಬಳಿ ಬೈಕ್‌ಗಳ ಮುಖಾಮುಖಿ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿತ್ತು. ಕೆ.ಆರ್.ಪೇಟೆ ತಾಲೂಕಿನ ತಂಡೆಕೆರೆ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಮೂರ್ನಾಲ್ಕು ಕಾರ್ಖಾನೆಗಳಿಗೆ ಸುಮಾರು 200ಕ್ಕೂ ಹೆಚ್ಚು ನೌಕರರನ್ನು ಕೆಲಸಕ್ಕೆ ನಿಯೋಜಿಸಿದ್ದರು. ಆ ಮೂಲಕ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಇದೀಗ ಅವರ ನಿಧನಾನಂತರವೂ ದೇಹದ ಅಂಗಾಂಗಗಳನ್ನು ಇತರೆ ರೋಗಿಗಳಿಗೆ ನೀಡುವ ಮೂಲಕ ಅಮರರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!