ಹೊಸದಿಗಂತ ಡಿಜಿಟಲ್ ಡೆಸ್ಕ್
ಯುಎಇ ನೆಲದಲ್ಲಿ ನಡೆದಿದ್ದ ಏಷ್ಯಾಕಪ್ ನಲ್ಲಿ ಪ್ರಶಸ್ತಿಯ ಫೇವರಿಟ್ ಆಗಿದ್ದ ಟೀಂ ಇಂಡಿಯಾ ಸೂಪರ್ 4 ಹಂತದಲ್ಲಿ ಸತತ ಸೋಲುಗಳನ್ನು ಅನುಭವಿಸಿ ಹೊರಬಿದ್ದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಈ ವಿಚಾರವಾಗಿ ವಿಶ್ಲೇಷಣೆ ಮಾಡಿರುವ ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಅಫ್ಘಾನ್, ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ಮಧ್ಯದಲ್ಲೇ ಗಾಯಗೊಂಡಿದ್ದು ಭಾರತ ತಂಡದ ಸಮತೋಲನದ ಮೇಲೆ ಪರಿಣಾಮ ಬೀರಿತು. ಇದರಿಂದಾಗಿಯೇ ಅಂತಿಮವಾಗಿ ಏಷ್ಯಾಕಪ್ನ ಸೂಪರ್ ಫೋರ್ ಹಂತದಲ್ಲಿ ನಿರ್ಗಮಿಸಲು ಕಾರಣವಾಯಿತು ಎಂದು ಹೇಳಿದ್ದಾರೆ.
ಬಲ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದ ಜಡೇಜಾ ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಬಿಸಿಸಿಐ ಆಲ್ರೌಂಡರ್ ಮತ್ತು ಸ್ಟ್ಯಾಂಡ್ಬೈ ಅಕ್ಷರ್ ಪಟೇಲ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿತ್ತು. ಜಡೇಜಾ ಅವರ ಅನುಪಸ್ಥಿತಿಯಲ್ಲಿ ಮ್ಯಾನೇಜ್ಮೆಂಟ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು.
ಭಾರತವು ತಮ್ಮ ಆರಂಭಿಕ ಪಂದ್ಯದಲ್ಲಿ ಎಡಗೈ ಆಟಗಾರ ಜಡೇಜಾ ಅವರನ್ನು ನಾಲ್ಕನೇ ಸ್ಥಾನದಲ್ಲಿ ಕಳುಹಿಸುವ ಮೂಲಕ ಪಾಕಿಸ್ತಾನವನ್ನು ಅಚ್ಚರಿಗೊಳಿಸಿತು. ಈ ಯೋಜನೆಯಿಂದ ಪಾಕ್ ಪ್ಲಾನ್ ಗಳೆಲ್ಲಾ ಉಲ್ಟಾ ಆಗಿದ್ದವು. ಪಾಕಿಸ್ತಾನದ ವಿರುದ್ಧ ಐದು ವಿಕೆಟ್ಗಳ ಜಯಗಳಿಸುವಲ್ಲಿ ಜಡೇಜಾ ಪ್ರಮುಖ ಪಾತ್ರವಹಿದ್ದರು. ಏಷ್ಯಾ ಕಪ್ ಗೆಲ್ಲಲು ಬಲಿಷ್ಠ ಭಾರತ ತಂಡವೇ ಹೆಚ್ಚು ಸಶಕ್ತವಾಗಿತ್ತು ಮತ್ತು ಫೇವರಿಟ್ ಎನಿಸಿಕೊಂಡಿತ್ತು ಎಂದು ಅಸ್ಗರ್ ಅಫ್ಘಾನ್ ಹೇಳಿದ್ದಾರೆ. ಆದರೆ ಈ ಟೂರ್ನಮೆಂಟ್ನಲ್ಲಿ ಭಾರತವು ಕೆಲ ವಿಚಾರಗಳನ್ನು ಸ್ವಲ್ಪ ಲಘುವಾಗಿ ತೆಗೆದುಕೊಂಡಿದ್ದರಿಂದ ಹೋರಬೀಳುವ ಪರಿಸ್ಥಿತಿ ಎದುರಿಸಬೇಕಾಯ್ತು ಎಂದು ಹೇಳಿದ್ದಾರೆ.
ʼಕಾಗದದಲ್ಲಿ, ಅವರು (ಭಾರತ) ಏಷ್ಯಾ ಕಪ್ ಗೆಲ್ಲಬಲ್ಲ ಅತ್ಯುತ್ತಮ ತಂಡವಾಗಿದ್ದರು. ಅವರು ಹೊಂದಿದ್ದ ತಂಡದ ಸಮತೋಲನವು ಉತ್ತಮವಾಗಿತ್ತು. ಆದರೆ ಬಹುಶಃ ಅವರು ವಿಷಯಗಳನ್ನು ಸ್ವಲ್ಪ ಹಗುರವಾಗಿ ತೆಗೆದುಕೊಂಡರು. ಸೂಪರ್ 4 ಹಂತದಲ್ಲಿ ಅವರ ಸೋಲಿಗೆ ಮುಖ್ಯ ಕಾರಣ ರವೀಂದ್ರ ಜಡೇಜಾಗೆ ಗಾಯವಾಗಿದ್ದು. ಇದು ಅವರ ತಂಡದ ಸಮತೋಲನದ ಮೇಲೆ ನಿಜವಾಗಿಯೂ ದೊಡ್ಡ ಪರಿಣಾಮ ಬೀರಿತು. ಇದರಿಂದಾಗಿ ಭಾರತ ಸೋತು ಹೊರಬೀಳಬೇಕಾಯ್ತುʼ ಎಂದು ಅಘ್ಘಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ