ಹೊಸದಿಗಂತ ವರದಿ ತುಮಕೂರು:
ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯನ್ನು ದುಷ್ಕರ್ಮಿಗಳು ಸ್ಫೋಟಕಗಳನ್ನು ಬಳಸಿ ಸ್ಫೋಟಿಸಲು ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಗ್ರಾಮ ಪಂಚಾಯತಿಯ ಗೋಡೆ ಬಿರುಕು ಬಿಟ್ಟಿದ್ದು ಕಿಟಕಿ ಮುರಿದಿದೆ.
ಬೂದಿಬೆಟ್ಟ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಳೆದ ರಾತ್ರಿ 9:30ರ ಸುಮಾರಿಗೆ ಸ್ಫೋಟದ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕೂಡಲೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೋಡಿದಾಗ ಸ್ಫೋಟದ ತೀವ್ರತೆಗೆ ಪಂಚಾಯತ್ ಕಚೇರಿ ಗೋಡೆಗಳು ಬಿರುಕು ಬಿಟ್ಟಿತ್ತು. ಕಿಟಕಿ ಒಡೆದು ದಾಖಲೆಗಳನ್ನು ಸಂಪೂರ್ಣ ಧ್ವಂಸ ಮಾಡುವ ಯತ್ನ ನಡೆದಿದೆ ಎಂದು ತಿಳಿದು ಬಂದಿದೆ ಸ್ಫೋಟಕ್ಕೆ ಕಚೇರಿಯಲ್ಲಿ ಮೂರು ಕುರ್ಚಿಗಳು ಸುಟ್ಟು ಕರಕಲಾಗಿವೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ಆನಂದಪ್ಪ, ಪ್ರತಿಕ್ರಿಯಿಸಿದ್ದು ಕಳೆದ ರಾತ್ರಿ 9:30ರ ವೇಳೆ ಸಮಯದಲ್ಲಿ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಭಾರೀ ಸದ್ದು ಕೇಳಿದೆ. ಈ ವೇಳೆ ಸ್ಥಳೀಯರು ಭಯದ ವಾತಾವರಣದಲ್ಲೇ ಬೆಂಕಿ ನಂದಿಸಿದ್ದಾರೆ ಎಂದಿದ್ದಾರೆ.
ಘಟನೆ ತಿಳಿದು ವೈಎನ್ ಹೊಸಕೋಟೆ ಪೋಲಿಸ್ ಠಾಣೆಯ ಸಿಪಿಐ ಕಾಂತರೆಡ್ಡಿ, ಪಿಎಸ್ಸೈ ಅರ್ಜುನ್ ಗೌಡ, ಗ್ರಾಪಂ ಪಿಡಿಒ ಮುದ್ದರಾಜು, ತಾ.ಪಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.