ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತು ಗುಜರಾತ್ ವಿಶ್ವವಿದ್ಯಾಲಯದ ವಿರುದ್ಧ ವ್ಯಂಗ್ಯ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರಿಗೆ ಅಹಮದಾಬಾದ್ನ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.
ಗುಜರಾತ್ ವಿವಿ ರಿಜಿಷ್ಟ್ರಾರ್ ಪಿಯೂಷ್ ಪಾಟೀಲ್ ದೂರಿನ ಮೇರೆಗೆ, ಮೇಲ್ನೋಟಕ್ಕೆ ಭಾರತೀಯ ದಂಡ ಸಂಹಿತೆಯಡಿ ಅವರ ವಿರುದ್ಧ ಪ್ರಕರಣವಿರುವುದನ್ನು ಮನಗಂಡು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಯೇಶ್ಭಾಯ್ ಚೋವಾಟಿಯಾ ಅವರ ಪೀಠ ಮೇ 23 ರಂದು ಕೋರ್ಟ್ ಗೆ ಹಾಜರಾಗುವಂಟೆ ಇಬ್ಬರು ಎಎಪಿ ನಾಯಕರಿಗೆ ಶನಿವಾರ ಸಮನ್ಸ್ ನೀಡಿದೆ. ಆದರೆ, ದೂರಿನಲ್ಲಿ ಉಲ್ಲೇಖಿಸಿದ ಮುಖ್ಯಮಂತ್ರಿಯೆಂಬ ಎಂಬ ಪದವನ್ನು ತೆಗೆಯುವಂತೆಯೂ ಕೂಡ ಕೋರ್ಟ್ ತಿಳಿಸಿದೆ.
ಇನ್ನು ಪ್ರಧಾನಿ ಮೋದಿ ಅವರ ಪದವಿಯ ಬಗ್ಗೆ ಮಾಹಿತಿ ನೀಡುವಂತೆ ಗುಜರಾತ್ ವಿಶ್ವವಿದ್ಯಾನಿಲಯಕ್ಕೆ(ಜಿಯು) ಮುಖ್ಯ ಮಾಹಿತಿ ಆಯುಕ್ತರ ಆದೇಶವನ್ನು ರದ್ದುಗೊಳಿಸಿ ಗುಜರಾತ್ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಿದ ನಂತರ ಕೇಜ್ರಿವಾಲ್ ಮತ್ತು ಸಿಂಗ್ ಈ ಕಾಮೆಂಟ್ ಮಾಡಿದ್ದಾರೆ. ದೂರುದಾರರ ಪ್ರಕಾರ, ಅವರು ಪತ್ರಿಕಾಗೋಷ್ಠಿಗಳಲ್ಲಿ ಮತ್ತು ಟ್ವಿಟರ್ ಹ್ಯಾಂಡಲ್ಗಳಲ್ಲಿ ಮೋದಿ ಪದವಿಯ ಬಗ್ಗೆ ವಿಶ್ವವಿದ್ಯಾಲಯವನ್ನು ಗುರಿಯಾಗಿಸಿಕೊಂಡು “ಮಾನಹಾನಿಕರ” ಹೇಳಿಕೆಗಳನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ವ್ಯಂಗ್ಯ ಮತ್ತು ಉದ್ದೇಶಪೂರ್ವಕವಾಗಿ ವಿಶ್ವವಿದ್ಯಾನಿಲಯದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಹೇಳಿಕೆಗಳು ವಿಶ್ವವಿದ್ಯಾನಿಲಯಕ್ಕೆ ಮಾನಹಾನಿಕರವಾಗಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಅದೇ ಉದ್ದೇಶದಿಂದ ಅವುಗಳನ್ನು ಮಾಧ್ಯಮಗಳಲ್ಲಿ ಮತ್ತು ಟ್ವಿಟರ್ ಹ್ಯಾಂಡಲ್ಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.