“ದಿ ಕೇರಳ ಸ್ಟೋರಿ”: ತಮಿಳುನಾಡು ಸರ್ಕಾರಕ್ಕೆ ಗುಪ್ತಚರ ಇಲಾಖೆಯಿಂದ ಎಚ್ಚರಿಕೆಯ ಸಂದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕೇರಳದ ಬಲವಂತದ ಧಾರ್ಮಿಕ ಮತಾಂತರದ ವಿಷಯದ ಮೇಲೆ ಸಿನಿಮಾ ಮಾಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ವೇಳೆ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳು ಈ ಚಿತ್ರ ಹಿಂದೂ-ಮುಸ್ಲಿಂ ಸಂಘರ್ಷ ಮತ್ತು ಜಾತ್ಯತೀತತೆಗೆ ವಿರುದ್ಧವಾಗಿರುವುದರಿಂದ ಅದನ್ನು ನಿಷೇಧಿಸುವಂತೆ ಆಗ್ರಹಿಸುತ್ತಿವೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಸಿನಿಮಾವನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಸುಳ್ಳು ಪ್ರಚಾರ ಎಂದು ಬಣ್ಣಿಸಿದ್ದಾರೆ.

ಶುಕ್ರವಾರ ಈ ಚಿತ್ರದ ಬಿಡುಗಡೆಗೆ ತಯಾರಿ ನಡೆಸುತ್ತಿರುವ ಕಾರಣ ತಮಿಳುನಾಡು ರಾಜ್ಯವು ಹೈ ಅಲರ್ಟ್ ಆಗಿದೆ. ಆ ರಾಜ್ಯದ ಗುಪ್ತಚರ ಇಲಾಖೆ ತಮಿಳುನಾಡು ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಸಿನಿಮಾ ಬಿಡುಗಡೆ ಬಗ್ಗೆ ಈಗಾಗಲೇ ಕೇರಳ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಈ ಚಿತ್ರ ಬಿಡುಗಡೆಯಾದರೆ ದೊಡ್ಡ ಮಟ್ಟದ ಗಲಾಟೆ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕೇರಳ ಸ್ಟೋರಿ ಸಿನಿಮಾವನ್ನು ತಮಿಳುನಾಡಿನಲ್ಲಿ ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಕೇರಳದಲ್ಲಿ 32,000 ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ, ಅವರಲ್ಲಿ ಕೆಲವರು ಭಯೋತ್ಪಾದಕ ಸಿದ್ಧಾಂತಕ್ಕೆ ಆಕರ್ಷಿತರಾಗಿ ಕೆಲವರು ಐಸಿಸ್ ಹೋರಾಟವನ್ನು ಬೆಂಬಲಿಸಲು ಸಿರಿಯಾಕ್ಕೆ ಹೋದರು ಎಂಬ ವಿಷಯದ ಮೇಲೆ ಚಲನಚಿತ್ರ ನಿರ್ಮಾಣವಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಚಿತ್ರವನ್ನು ಟೀಕಿಸಿದ್ದು, 32 ಸಾವಿರ ಮಂದಿ ಮತಾಂತರಗೊಂಡಿರುವುದನ್ನು ಸಾಬೀತುಪಡಿಸಿದರೆ ರೂ.1 ಕೋಟಿ ನೀಡುವುದಾಗಿ ಸವಾಲು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!