ಹೊಸ ದಿಗಂತ ವರದಿ, ಮುಂಡಗೋಡ:
ಬಸ್ ಹತ್ತುವಾಗ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಅಂತರಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಮಿಲ್ಲತ್ತನಗರದ ರಾಕೇಶ ಮಧುಕರ ಗುಂಜಾಳ(29)ಎಂಬುವನೆ ಬಂಧಿತ ಆರೋಪಿಯಾಗಿದ್ದು ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಬಂಧಿತನಿಂದ ಐವತ್ತೇಳು ಸಾವಿರ ರೂಪಾಯಿ ಹಣವನ್ನು ವಶ ಪಡಿಸಿಕೋಳ್ಳಲಾಗಿದೆ.
ಘಟನೆಯ ವಿವರ
ಹುಬ್ಬಳ್ಳಿಯ ಕುಬಸದಗಲ್ಲಿಯ ಬಟ್ಟೆಯ ವ್ಯಾಪಾರಿ ದೇವರಾಮ ಖವಾಸೆ ಎಂಬವನು ಆ.10ರಂದು ಬಟ್ಟೆ ಅಂಗಡಿಗಳಿಂದ ಒಂದು ಲಕ್ಷ ಆರವತ್ತೆಂಟು ಸಾವಿರ ರೂಪಾಯಿ ಹಣವನ್ನು ಬ್ಯಾಗನಲ್ಲಿ ಇಟ್ಟುಕೊಂಡು ಹುಬ್ಬಳ್ಳಿಗೆ ಹೋಗುವ ಬಸ್ ಹತ್ತುವಾಗ ಯಾರೋ ಕಳ್ಳರು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿತ್ತು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ, ಹೆಚ್ಚುವರಿ ವರಿಷ್ಠಾಧಿಕಾರಿ ಎಸ್.ಬದರಿನಾಥ, ಶಿರಸಿ ಡಿವೈಎಸ್ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ.ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ ಮಬನೂರ, ಎನ್.ಡಿ.ಜಕ್ಕಣ್ಣವರ, ಸಿಬ್ಬಂದಿಗಳಾದ ಮಹೇಶ ಮಾಳಿ,ಮಣಿಮಾಲನ್ ಮೇಸ್ತ್ರಿ ಮಹ್ಮದಸಲಿಂ, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ ಲಮಾಣಿ, ಶಂಭುಲಿಂಗ ಜಾವೂರ,ಕಾಶಿರಾಯ ಕನ್ನಾಳ, ಸಂಗಮೇಶ ದೊಡ್ಡವಾಡ, ನಾಗರಾಜ ಬೇಗಾರ ಉದಯ ಗುಣಗಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದು ಒಬ್ಬ ಆರೋಪಿ ಸಿಕ್ಕಿದ್ದು ಮತ್ತೋರ್ವ ತಲೆ ಮರೆಸಿಕೊಂಡಿದ್ದಾನೆ ಸದ್ಯ ಆರೋಪಿಯಿಂದ ಐವತ್ತೇಳುಸಾವಿರ ರೂಪಾಯಿ ವಶಪಡಿಸಿಕೋಳ್ಳಲಾಗಿದೆ. 2019ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂಡಗೋಡಕ್ಕೆ ಆಗಮಿಸಿದ್ದಾಗ ಮೇರವಣಿಗೆಯ ವೇಳೆ ವ್ಯಕ್ತಿಯೋಬ್ಬರ ಜೇಬಿನಿಂದ ಒಂದು ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡಿರುವುದು ತಾನೆ ಎಂದು ಆರೋಪಿ ಪೊಲೀಸ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ.