ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಹಲ್ಗಾಮ್ನಲ್ಲಿ ದಾಳಿಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ವಿಚಾರಣೆ ಸಂದರ್ಭದಲ್ಲಿ ಕೋರ್ಟ್, ನೀವು ನಮ್ಮ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸಲು ಬಯಸುತ್ತೀರಾ ಎಂದು ಪ್ರಶ್ನಿಸುವ ಮೂಲಕ ಅರ್ಜಿದಾರರಿಗೆ ಚಾಟಿ ಬೀಸಿದೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಡೆದ ಹತ್ಯೆಗಳ ತನಿಖೆಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಉಗ್ರರ ದಾಳಿ ಕುರಿತು ತನಿಖೆಗೆ ನ್ಯಾಯಾಂಗ ಸಮಿತಿ ರಚಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸ್ವತಂತ್ರ, ಪಾರದರ್ಶಕ ತನಿಖೆಯ ಅಗತ್ಯವಿದೆ ಎಂದು ಜಮ್ಮು-ಕಾಶ್ಮೀರದ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಫತೇಶ್ ಕುಮಾರ್ ಶಾಹು, ಮೊಹಮ್ಮದ್ ಜುನೈದ್, ವಿಕ್ಕಿ ಕುಮಾರ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ನ್ಯಾಯಪೀಠ,ಸಂಭಾವ್ಯ ಮಿಲಿಟರಿ ಪ್ರತಿಕ್ರಿಯೆಗೆ ಸಿದ್ಧರಾಗುವಾಗ ಭದ್ರತಾ ಪಡೆಗಳ ಮನೋಬಲವನ್ನು ಕುಗ್ಗಿಸುವುದು ಇದರ ಉದ್ದೇಶವೇ? . ನ್ಯಾಯಾಂಗ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಯಾವಾಗಿನಿಂದ ಭಯೋತ್ಪಾದನಾ ವಿರೋಧಿ ತನಿಖೆಗಳಲ್ಲಿ ಪರಿಣತರಾದರು?ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸುವಾಗ ಜವಾಬ್ದಾರಿಯ ಅಗತ್ಯವನ್ನು ಒತ್ತಿ ಹೇಳಿದ ನ್ಯಾಯಮೂರ್ತಿ ಸೂರ್ಯ ಕಾಂತ್, ಅಂತಹ ಪಿಐಎಲ್ಗಳನ್ನು ಸಲ್ಲಿಸುವ ಮೊದಲು ಜವಾಬ್ದಾರಿಯುತರಾಗಿರಿ. ನಿಮಗೆ ದೇಶದ ಬಗ್ಗೆಯೂ ಕೆಲವು ಕರ್ತವ್ಯವಿದೆ. ನಮ್ಮ ಭದ್ರತಾ ಪಡೆಗಳ ಮನೋಬಲವನ್ನು ಕುಗ್ಗಿಸಬೇಡಿ ಎಂದು ಟೀಕಿಸಿದರು.
ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಂತಹ ಅರ್ಜಿಗಳು ಹೈಕೋರ್ಟ್ ಮುಂದೆಯೂ ಹೋಗಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯವು ಅರ್ಜಿದಾರರಿಗೆ ಹಿಂತೆಗೆದುಕೊಳ್ಳಲು ಅವಕಾಶ ನೀಡಿತು ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯ ಅಂಶದ ಮೇಲೆ ಮಾತ್ರ ಸಂಬಂಧಪಟ್ಟ ಹೈಕೋರ್ಟ್ ಅನ್ನು ಸಂಪರ್ಕಿಸಲು ನ್ಯಾಯಮೂರ್ತಿ ಅವಕಾಶ ನೀಡಿದ್ದಾರೆ.