ಪುತ್ರ ವ್ಯಾಮೋಹದ ಮೂಲಕ ತನ್ನ ಇಡೀ ರಾಜವಂಶವನ್ನು ನಾಶಪಡಿಸಿದ ಮಹಾಭಾರತ ಯುದ್ಧದ ಅತಿದೊಡ್ಡ ಖಳನಾಯಕ ಧೃತರಾಷ್ಟ್ರ. ಇಂತಹ ದೃತರಾಷ್ಟ್ರ ಹುಟ್ಟು ಕುರುಡನಾಗಿ ಜನಿಸಿದ್ದು ಏಕೆ? ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿದೆ ದೊಡ್ಡ ಕಥೆ.
ಭೀಷ್ಮನ ತಂದೆ ಶಾಂತನು ಮಹಾರಾಜನಿಗೆ ಸತ್ಯವತಿ ಎಂಬ ಹೆಂಡತಿ ಇದ್ದಳು. ಈ ಸತ್ಯವತಿಯ ಮಗ ವಿಚಿತ್ರವೀರ್ಯ ನಿಗೆ ಮದುವೆ ಮಾಡಿಸಲು ಕಾಶಿಯಿಂದ ಭೀಷ್ಮ ಅಂಬಿಕಾ ಹಾಗೂ ಅಂಬಾಲಿಕೆಯನ್ನ ಅಪಹರಿಸಿ ತಂದಿರುತ್ತಾನೆ. ಆದರೆ ವಿಚಿತ್ರವೀರ್ಯ ಅಕಾಲಿಕ ಮರಣಕ್ಕೆ ತುತ್ತಾದ ಕಾರಣ ವಂಶವನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸತ್ಯವತಿ ವಂಶಾಭಿವೃದ್ಧಿಗಾಗಿ ಮಹರ್ಷಿ ವೇದ ವ್ಯಾಸರನ್ನ ಕರೆಸಿ, ಕಷ್ಟವನ್ನು ಹೇಳಿಕೊಳ್ಳುತ್ತಾಳೆ.
ಮಹರ್ಷಿಗಳು, ನನ್ನ ದಿವ್ಯ ಶಕ್ತಿಯಿಂದ ಇಬ್ಬರಿಗೂ ಪುತ್ರ ಪ್ರಾಪ್ತಿ ಮಾಡುತ್ತೇನೆಂದು ಹೇಳಿದರು. ಮಹರ್ಷಿಗಳ ದಿವ್ಯ ಶಕ್ತಿಯನ್ನು ತಾಳರಾದರೇ ಅಂಬಿಕಾ ಕಣ್ಣು ಮುಚ್ಚಿದಳು. ಹೀಗಾಗಿ ಅಂಬಿಕಾಳಿಗೆ ಹುಟ್ಟಿದ ಪುತ್ರ ಕುರುಡನಾದ. ಅವನೇ ಧೃತರಾಷ್ಟ್ರ, ಎರಡನೇ ರಾಣಿ ಅಂಬಾಲಿಕಾ ವೇದವ್ಯಾಸರನ್ನು ಕಂಡು ತುಂಬಾ ಹೆದರಿದಳು ಈಗಾಗಿ ಅವರಿಗೆ ಜನಿಸಿದ ಪಾಂಡು ಮೊದಲಿನಿಂದಲೂ ದುರ್ಬಲನಾಗಿದ್ದ. ನಂತರ ಓರ್ವ ದಾಸಿಯ ಮೇಲೂ ದಿವ್ಯ ಶಕ್ತಿಯನ್ನು ಪ್ರಯೋಗಿಸಿದ ವೇದವ್ಯಾಸರು ಒಂದು ಮಗುವನ್ನು ಕರುಣಿಸಿದರು ಆತನೇ ಮಹಾಜ್ಞಾನಿ ವಿಧುರ.
ಹಿಂದಿನ ಜನ್ಮದ ಪಾಪ
ಹಿಂದಿನ ಜನ್ಮದಲ್ಲಿ ಧೃತರಾಷ್ಟ್ರನು ಓರ್ವ ದುಷ್ಟ ರಾಜನಾಗಿದ್ದ ಹಾಗೂ ತನ್ನ ದುರಾಡಳಿತದಿಂದ ಜನರನ್ನು ತುಂಬಾ ಪೀಡಿಸಿ ಹಿಂಸಿಸುತ್ತಿದ್ದ ಒಮ್ಮೆ ಆತ ಅರಣ್ಯದಲ್ಲಿ ಬೇಟೆಗೆಂದು ಹೋಗುತ್ತಿದ್ದಾಗ ಕಾಡಿನಲ್ಲಿನ ಒಂದು ಕೊಳದ ಹತ್ತಿರದಲ್ಲಿ ಹಂಸ ಪಕ್ಷಿಯೊಂದು ತನ್ನ ಮರಿಗಳ ಜೊತೆ ಹೋಗುತ್ತಿತ್ತು. ಈ ವೇಳೆ ಅದನ್ನು ಕಂಡ ದುಷ್ಟ ರಾಜನು ಹಂಸದ ಕಣ್ಣುಗಳನ್ನ ಕಿತ್ತು ಹಾಕುವಂತೆ ಆದೇಶ ನೀಡುತ್ತಾನೆ ಹೀಗೆಂದು ರಾಜನಿಂದ ಆಜ್ಞಾಪಿಸಲ್ಪಟ್ಟ ದೂತರು ಹಂಸದ ಜೊತೆಗೆ ಅದರ ಮರಿಗಳನ್ನ ವಧೆ ಮಾಡಿದರು.
ಆಗ ಹಂಸ ಪಕ್ಷಿಯು ಈ ಜನ್ಮದಲ್ಲಿ ನಿನ್ನಿಂದ ನಾನು ಪಟ್ಟ ಪುತ್ರ ಶೋಕವನ್ನು ನೀನು ಸಹ ಅನುಭವಿಸು ಎಂದು ರಾಜನಿಗೆ ಶಾಪ ಕೊಟ್ಟಿತು. ಹಂಸದ ಶಾಪದ ಪ್ರಭಾವದಿಂದ ಮುಂದಿನ ಜನ್ಮದಲ್ಲಿ ಆ ರಾಜ ಧೃತರಾಷ್ಟ್ರನ ರೂಪದಲ್ಲಿ ಕುರುಡ ರಾಜಕುಮಾರನಾಗಿ ಜನಸಿದ ಜೊತೆಗೆ ಹಿಂದಿನ ಜನ್ಮದಲ್ಲಿ ಹಂಸದ ಮರಿಗಳು ಸಾವನ್ನಪ್ಪಿದಂತೆ ಧೃತರಾಷ್ಟ್ರನ ಎಲ್ಲಾ ಮಕ್ಕಳು ಕುರುಕ್ಷೇತ್ರ ಯುದ್ಧದಲ್ಲಿ ಘೋರವಾಗಿ ಸಾವನ್ನಪ್ಪುತ್ತಾರೆ.