ಕಣಿವೆ ನಾಡಿನ ಶಾಂತ ವಾತಾವರಣ ಅಸಹಿಷ್ಣತೆಯೇ? ಕಾಂಗ್ರೆಸ್ಸಿಗೆ ಬಿಜೆಪಿ ಪ್ರಶ್ನೆ

ಹೊಸದಿಗಂತ ವರದಿ ಮಂಡ್ಯ:

ದೇಶದಲ್ಲಿ ಸಹಿಷ್ಣತೆ ಹೆಚ್ಚುತ್ತಿದೆ. ಸದಾ ಉಗ್ರ ಚಟುವಟಿಕೆಗಳ ತಾಣವಾಗಿದ್ದ ಜಮ್ಮು ಮತ್ತು ಕಾಶ್ಮೀರದಂತಹ ಕಣಿವೆ ಪ್ರದೇಶದಲ್ಲೇ ಸಹಿಷ್ಣತೆ ಇರುವಾಗ ಅಸಷ್ಣತೆಯ ವಾತಾವರಣವಾದರೂ ಎಲ್ಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಪ್ರಶ್ನಿಸಿದರು.
ಭಾರತ್‌ಜೋಡೋ ಯಾತ್ರೆ ಕಾಶ್ಮೀರವನ್ನು ತಲುಪಿ ಅಲ್ಲಿನ ಶ್ರೀನಗರದಲ್ಲಿ ರಾಹುಲ್ ಮತ್ತು ಪ್ರಿಯಾಂಕ ಸೇರಿದಂತೆ ಕಾಂಗ್ರೆಸ್ಸಿನ ಬಹುತೇಕ ನಾಯಕರು ಮಂಜುಗಡ್ಡೆಯಲ್ಲಿ ಮನಸೋ ಇಚ್ಚೆ ಆಟವಾಡಿರುವುದನ್ನು ದೇಶವಾಸಿಗಳಿಗಾಗಿ ಸ್ವತಃ ಕಾಂಗ್ರೆಸ್ಸಿಗರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಸಹಿಷ್ಣತೆಯ ಸಂಕೇತವಲ್ಲವೇ ಎಂದು ಕೇಳಿದರು.

ದಲಿತ ಆದಿವಾಸಿ ಮಹಿಳೆಯನ್ನು ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿಯಂತಹ ಹುದ್ದೆಗೆ ಆಯ್ಕೆ ಮಾಡುವ ಮೂಲಕ ದಲಿತರಿಗೂ ಉನ್ನತ ಸ್ಥಾನಮಾನವನ್ನು ನೀಡುವ ಮೂಲಕ ಬಿಜೆಪಿ ಸಂವಿಧಾನದ ಆಶಯವನ್ನು ಎತ್ತಿಹಿಡಿದಿದೆ. ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್‌ಶಾ ಅವರು ಜಮ್ಮು-ಕಾಶ್ಮೀರ ಸೇರಿದಂತೆ ದೇಶದೆಲ್ಲೆಡೆ ಭಯೋತ್ಪಾದನೆಯನ್ನು ನಿಗ್ರಹ ಮಾಡುವ ಕಠಿಣ ಕ್ರಮಕ್ಕೆ ಮುಂದಾಗಿರುವುದು ಭಾರತದಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಆರ್ಥಿಕತೆಯಲ್ಲಿ ವಿಶ್ವದ 5ನೇ ಸ್ಥಾನದಲ್ಲಿರುವ ಭಾರತದ 120 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆಯನ್ನು ಎರಡು ಬಾರಿ ಉಚಿತವಾಗಿ ನೀಡಲಾಗಿದೆ. ಬಡ ರೋಗಗಿಳಿಗೆ ಕಡಿಮೆ ದರದಲ್ಲಿ ಔಷಧ ದೊರೆಯಬೇಕೆಂಬ ಉದ್ದೇಶದಿಂದ ದೇಶದಾದ್ಯಂತ 8800 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಉದ್ದಮಿಗಳ ಪರವಾಗಿಲ್ಲ ಎಂಬುದನ್ನು ತೋರಿಸಿದೆ ಎಂದು ವಿಪಕ್ಷಗಳಿಗೆ ತಿಳುವಳಿಕೆ ನೀಡಿದ್ದಾರೆ.

ಕೇಂದ್ರದಿಂದ ನೀಡುವ 100ರೂ. ಯೋಜನೆ ಸಮಾಜದ ಕಟ್ಟ ಕಡೆಯ ಫಲಾನುಭವಿಗೆ ಕೇವಲ 15 ರೂ. ದೊರೆಯುತ್ತಿತ್ತು. ಉಳಿದ 85 ರೂ. ಅಧಿಕಾರಿಗಳು, ಜನಪ್ರತಿನಿಧಿಗಳು, ಮಧ್ಯವರ್ತಿಗಳ ಪಾಲಾಗುತ್ತಿತ್ತು ಎಂದು ಸ್ವತಃ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿಯವರೇ ತಿಳಿಸಿದ್ದರು. ಇದನ್ನು ಅರಿತ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ ಯಾರೆಲ್ಲಾ ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲವೋ ಅಂತವರಿಗೆ ಜನ್‌ಧನ್ ಖಾತೆಗಳನ್ನು ಮಾಡಿಸಿ ನೇರವಾಗಿ ಕೇಂದ್ರದ ಹಣವನ್ನು ಜನಸಾಮಾನ್ಯರ ಬ್ಯಾಂಕ್ ಖಾತೆಗೆ ಹಾಕುವ ಕೆಲಸ ಮಾಡಿ ಒಂದು ರೂ. ಸೋರಿಕೆಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಇದು ಕಾಂಗ್ರೆಸ್ ಪಕ್ಷಕ್ಕೆ ಕಾಣಿಸುತ್ತಿಲ್ಲವೇ ಎಂದು ಕಿಡಿಕಾರಿದರು.

ವಿಶ್ವಮಟ್ಟದಲ್ಲಿ ಭಾರತಕ್ಕೆ ಅಷ್ಟೇನೂ ಮಾನ್ಯತೆ ಇಲ್ಲದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಜಿ. 20 ಶೃಂಗಸಭೆಯ ನೇತೃತ್ವ ವಹಿಸುವಂತಹ ಮಟ್ಟಕ್ಕೆ ನಾವು ಬೆಳೆದು ನಿಂತಿದ್ದೇವೆ. ಆತ್ಮನಿರ್ಭರ ಯೋನಜೆಯಡಿ ಎಲ್ಲ ವಸ್ತುಗಳನ್ನೂ ನಾವೇ ಉತ್ಪಾದನೆ ಮಾಡಿ ಸ್ವಾವಲಂಭನೆ ಸಾಧಿಸಿ ನೆರೆ ರಾಷ್ಟ್ರಗಳೂ ಸಹ ಬೆರುಗು ಗಣ್ಣಿನಿಂದ ನೋಡುವಂತಹ ದಿನಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಸೃಷ್ಠಿಸಿದ್ದಾರೆ. ಇದೆಲ್ಲವನ್ನೂ ಬಿಟ್ಟು ಇಲ್ಲದ ಗೊಂದಲವನ್ನುಂಟು ಮಾಡಿ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!