ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿರುವ ಯುವ ಜನರ ಹೃದಯಾಘಾತಗಳ ವಿದ್ಯಮಾನಕ್ಕೂ ಕೋವಿಡ್ ರೋಗಕ್ಕೂ ಸಂಬಂಧವಿದೆಯೇ ಎಂಬುದು ಹಲವರ ಪ್ರಶ್ನೆಯಾಗಿತ್ತು. ಇತ್ತೀಚೆಗೆ ಗುಜರಾತಿನಲ್ಲಿ ಗರ್ಭಾ ನೃತ್ಯದಲ್ಲಿ ತೊಡಗಿದ್ದ ಯುವಕರ ಹೃದಯಾಘಾತ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತ, ಕೇಂದ್ರದ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಈ ಬಗ್ಗೆ ವಿವರಗಳನ್ನು ನೀಡಿದ್ದಾರೆ.
ಹೃದಯಾಘಾತದಿಂದ ಪಾರಾಗಲು ಅತಿಯಾದ ವರ್ಕೌಟ್ ಹಾಗೂ ಅತಿಯಾದ ಶ್ರಮವಹಿಸುವ ಕೆಲಸ ಕಾರ್ಯಗಳಲ್ಲಿ ತೊಡಗಬೇಡಿ. ಕೋವಿಡ್ ಪ್ರಭಾವ ಕಡಿಮೆಯಾಗಿದೆ ಎನಿಸಬಹುದು, ನಾವು ಎಂದಿನಂತೆ ಮಾಮೂಲಾಗಿ ಇದ್ದೀವಿ ಎನಿಸಬಹುದು, ಆದರೆ ಕೋವಿಡ್ ಪ್ರಭಾವ ಇನ್ನೂ ಇದೆ, ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಬೇಕಿದೆ ಎಂದಿದ್ದಾರೆ.
ಇತ್ತೀಚೆಗೆಷ್ಟೇ ಗುಜರಾತ್ನಲ್ಲಿ ನವರಾತ್ರಿ ಸಂಭ್ರಮದ ಗರ್ಭಾ ನೃತ್ಯದ ವೇಳೆ 10 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಯುವಕರು ಹಾಗೂ ಮಧ್ಯವಯಸ್ಸಿನವರೇ. ಸೌರಾಷ್ಟ್ರದಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ, ಅದರಲ್ಲೂ ಯುವಕರೇ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದಿದ್ದಾರೆ.
ಇತ್ತೀಚೆಗಷ್ಟೇ 17 ವರ್ಷದ ಯುವಕ ವೀರ್ ಶಾ ಕಪಡ್ವಂಜ್ನಲ್ಲಿ ಗರ್ಭಾ ನೃತ್ಯದ ವೇಳೆ ಏಕಾಏಕಿ ತಲೆಸುತ್ತಿ ಬಿದ್ದಿದ್ದಾನೆ, ತಕ್ಷಣವೇ ವೈದ್ಯರು ಸಿಪಿಆರ್ ಚಿಕಿತ್ಸೆ ನೀಡಿದ್ದಾರೆ, ನಂತರ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ, ಆದರೆ ಅಷ್ಟರೊಳಗೆ ಆತ ಮೃತಪಟ್ಟಿದ್ದ ಎಂದು ಡಾಕ್ಟರ್ ಆಯುಶ್ ಪಟೇಲ್ ಮಾಹಿತಿ ನೀಡಿದ್ದಾರೆ.