ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ತನ್ನ ಕೇಂದ್ರಕ್ಕೆ ಇಂದು ಮುಂಜಾನೆ ಬೆಂಕಿ ಹಚ್ಚಲಾಗಿದೆ ಎಂದು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ ತಿಳಿಸಿದೆ. ಇಸ್ಕಾನ್ ಕಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ ದಾಸ್ ಎಕ್ಸ್ ಪೋಸ್ಟ್ನಲ್ಲಿ ಇಸ್ಕಾನ್ ಸಂಸ್ಥೆಯ ನಮ್ಹಟ್ಟಾ ಕೇಂದ್ರವನ್ನು ಸುಟ್ಟುಹಾಕಿದ್ದಾರೆ ಎಂದು ಹೇಳಿದ್ದಾರೆ.
ಇಂದು ಮುಂಜಾನೆ 2 ರಿಂದ 3 ಗಂಟೆಯ ನಡುವೆ ತುರಗ್ ಪೊಲೀಸ್ ವ್ಯಾಪ್ತಿಗೆ ಒಳಪಡುವ ಧೌರ್ ಗ್ರಾಮದ ಹರೇ ಕೃಷ್ಣ ನಮ್ಹಟ್ಟಾ ಸಂಘದ ಅಧೀನದಲ್ಲಿರುವ ರಾಧಾ ಕೃಷ್ಣ ದೇವಸ್ಥಾನ ಮತ್ತು ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ದೇವಾಲಯಗಳು ಢಾಕಾದಲ್ಲಿವೆ ಎಂದು ರಾಧಾರಮಣ ದಾಸ್ ತಿಳಿಸಿದ್ದಾರೆ.
ಹಿಂದು ಸಮುದಾಯದ ಸದಸ್ಯರ ಮೇಲೆ ದಾಳಿಗಳು ಎಡೆಬಿಡದೆ ನಡೆಯುತ್ತಿವೆ, ಇಸ್ಕಾನ್ ಬಾಂಗ್ಲಾದೇಶದ ಸರ್ಕಾರದ ಗಮನಕ್ಕೆ ಈ ಮಾಹಿತಿಯನ್ನು ನೀಡಿದ್ದರೂ ಅವರ ಕುಂದುಕೊರತೆಗಳನ್ನು ಶಮನಗೊಳಿಸಲು ಮತ್ತು ಅವರ ಕಾಳಜಿಯನ್ನು ಪರಿಹರಿಸಲು ಪೊಲೀಸರು ಮತ್ತು ಆಡಳಿತವು ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.