ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಬಂಧನದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ʻಎಎಪಿ ಬಹಿರಂಗವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಅದರಲ್ಲಿ ಸಿಕ್ಕಿಬಿದ್ದರೆ ರಾಜಕೀಯ ಮಾಡೋದರಲ್ಲಿ ಆಪ್ ನಿಸ್ಸೀಮʼ ಎಂದು ಎಂದು ವಾಗ್ದಾಳಿ ನಡೆಸಿದರು.
ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ನಿನ್ನೆ ಮದ್ಯದ ಹಗರಣ ಪ್ರಕರಣದಲ್ಲಿ ಇಡಿ ಬಂಧಿಸಿದೆ. ಈ ಕುರಿತು ಇಂದು ಭುವನೇಶ್ವರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಬಿತ್ ಪಾತ್ರಾ..ʻದೆಹಲಿ ಅಬಕಾರಿ ನೀತಿ ಪ್ರಕರಣದ ಆರೋಪಿಗಳು ಅವರ ವಂಚನೆಯ ಪ್ರಮಾಣವನ್ನು ಅವಲಂಬಿಸಿ ಕ್ರಮದಲ್ಲಿ ಸಿಕ್ಕಿಬೀಳುತ್ತಿದ್ದಾರೆʼ ಎಂದರು.
ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನದ ಬಳಿಕ ನಂತರ ಸಂಜಯ್ ಸಿಂಗ್ ಅವರ ಅರೆಸ್ಟ್ ಎರಡನೆಯದ್ದಾಗಿದೆ. ಬಂಧನದ ಕುರಿತು ಪ್ರತಿಕ್ರಿಯಿಸಿದ ಎಎಪಿ ಸಂಸದ ಸಂದೀಪ್ ಪಾಠಕ್, ಪ್ರಕರಣವು “ಎಎಪಿಯನ್ನು ಅಕ್ರಮವಾಗಿ ಒಡೆಯುವ ಮತ್ತು ಸೋಲಿಸುವ ಪ್ರಕ್ರಿಯೆ” ಹೊರತು ಬೇರೇನೂ ಅಲ್ಲ ಎಂದು ಆರೋಪಿಸಿದರು.
ಸಿಂಗ್ ಬಂಧನವನ್ನು ವಿರೋಧಿಸಿ ಎಎಪಿ ಗುರುವಾರ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಸಜ್ಜಾಗಿದೆ.