ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಕಡೆಗೂ ಟಿಕೆಟ್ನಿಂದ ವಂಚಿತರಾದರು. ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲಗೆ ಕಾಂಗ್ರೆಸ್ ಅಂತಿಮವಾಗಿ ಟಿಕೆಟ್ ಘೋಷಿಸಿದ್ದರು.
ಇದರಿಂದ ಬೇಸರಗೊಂಡುಕಣ್ಣೀರಿಟ್ಟ ವೀಣಾ ಇಂದಿಗೂ ತಮ್ಮ ಅಸಮಾಧಾನದಿಂದ ಹೊರಬಂದಿಲ್ಲ. ಹೀಗಾಗಿ ಅವರ ಮುಂದಿನ ನಡೆ ಕೈ ನಾಯಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಡಬೇಕಿತ್ತು. ಆದರೆ ಅದು ನಡೆದಿಲ್ಲ. ಹಾಗಂತ ನಾನು ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯಲ್ಲ. ಖಂಡಿತ ಅಖಾಡದಲ್ಲಿ ಇದ್ದೇ ಇರ್ತಿನಿ ಎಂದು ವೀಣಾ ಕಾಶಪ್ಪನವರ್ ಶಪಥ ಮಾಡಿದ್ದಾರೆ.
ವೀಣಾ ಹೇಳಿಕೆಯ ಬೆನ್ನಲ್ಲೇ ಸ್ವತಂತ್ರವಾಗಿ ಅಖಾಡಕ್ಕೆ ಇಳಿಯುವಂತೆ ಬೆಂಬಲಿಗರು ಒತ್ತಾಯಿಸಿದ್ದು, ಕಾಶಪ್ಪನವರ ದಂಪತಿ ಅಸಮಾಧಾನದ ಚೆಂಡು ಸಿಎಂ ಅಂಗಳಕ್ಕೆ ಬಂದು ಬಿದ್ದಿದೆ. ಇಂದು ಸಂಜೆಯೇ ಸಿಎಂ, ಡಿಸಿಎಂ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಸಭೆಗೆ ಕಾಶಪ್ಪನವರ ದಂಪತಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಭಾಗಿಯಾಗಲಿದ್ದಾರೆ.