ಹೊಸದಿಗಂತ ವರದಿ, ಹಾವೇರಿ :
ಬಿಜೆಪಿ ಬ್ಯಾನ್ ಮಾಡಿರುವ ಪಿಎಫ್ಐಯನ್ನು ಮತ್ತೆ ಕಾಂಗ್ರೆಸ್ ಬ್ಯಾನ್ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿರುವುದು ಕಾಂಗ್ರೆಸ್ನವರ ಪ್ರಣಾಳಿಕೆ ಬಹಳ ಹಾಸ್ಯಾಸ್ಪದವೆನಿಸುತ್ತದೆ ಎಂದು ಕೃಷಿ ಸಚಿವ ಹಾಗೂ ಹಿರೇಕೆರೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಹೇಳಿದರು.
ಈ ಕುರಿತು ಹಿರೇಕೆರೂರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಭಜರಂಗ ದಳವನ್ನು ಬ್ಯಾನ್ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನು ಗಮನಿಸಿದರೆ ಭಾರತದಲ್ಲಿ ಹಿಂದುತ್ವ ಇದ್ದರೆಷ್ಟು ಹೋದರೆಷ್ಟು ಎನ್ನುವ ಧೋರಣೆ ಕಾಂಗ್ರೆಸ್ನದಾಗಿದೆ. ಭಾರತದಿಂದ ಹಿಂದುಗಳನ್ನು ಓಡಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಭಜರಂಗದಳವನ್ನು ಬ್ಯಾನ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರನ್ನು ಅಲ್ಲಿಂದ ಓಡಿಸಲಾಗಿತ್ತು. ಈಗ ಹಿಂದುತ್ವನ್ನು ದೇಶದಲ್ಲಿರದಂತೆ ಮಾಡುವುದಕ್ಕೆ ಮುಂದಾಗಿದ್ದಾರೆ. ನರೇಂದ್ರ ಮೋದಿಯವರ ಸರ್ಕಾರ ಬಂದ ನಂತರದಲ್ಲಿ ಈಗ ಮತ್ತೆ ಅಲ್ಲಿ ಕಾಶ್ಮೀರಿ ಪಂಡಿತರನ್ನು ಮರಳಿ ಕಳಿಸುವ ಕೆಲಸವಾಗಬೇಕಾಗಿದೆ.
ಕಾಂಗ್ರೆಸ್ಸಿನವರಿಗೆ ಓಟ್ ಬ್ಯಾಂಕ್ ಮುಖ್ಯ. ದೇಶದಲ್ಲಿ ಹಿಂದುಗಳು, ಹಿಂದುತ್ವ ಇದ್ದರೆನೂ ಹೋದರೇನು, ಅವರಿಗೆ ಮತಗಳು ಮಾತ್ರ ಬೇಕಾಗಿದೆ. ಭಜರಂಗದಳದವರು ಅಪ್ಪಟ ದೇಶ ಪ್ರೇಮಿಗಳು, ಹಿಂದುತ್ವವಾದಿಗಳು. ಭಜರಂಗದಳವನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳಿರುವುದು ಮೂರ್ಖತನದ ಪರಮಾವಧಿ ಎಂದು ಹೇಳಿದರು.