ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದ್ದು ನಿಜ, ಯಾರು ತಪ್ಪು ಮಾಡಿದ್ದಾರೋ ಶಿಕ್ಷೆ ಆಗುತ್ತೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣಕ್ಕೆ ಸರ್ಕಾರಕ್ಕೂ ಸಂಬಂಧ ಇಲ್ಲ. ಈ ಹಗರಣದಲ್ಲಿ ಎಸ್‌ಐಟಿ, ಸಿಬಿಐ ತನಿಖೆ ಮಾಡುತ್ತಿವೆ. ಇಡಿ ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ನಾಗೇಂದ್ರ ಬಂಧನವಾಗಿದೆ, ದದ್ದಲ್ ಮನೆ ಮೇಲೆ ದಾಳಿ ಮಾಡಿ ತನಿಖೆ ನಡೆಸಿದ್ದಾರೆ. ಯಾರು ತಪ್ಪು ಮಾಡಿದ್ದಾರೋ, ಅವರಿಗೆ ಶಿಕ್ಷೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಈ ಬಾರಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಲಾಗಿತ್ತು. ಆದರೆ, ಬಿಜೆಪಿ- ಜೆಡಿಎಸ್‌ನವರು ವಾಲ್ಮೀಕಿ ಹಗರಣ ಚರ್ಚೆಗೆ ತಂದರು. ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಲಾಗಿದೆ. ನಾವೇನು ಚರ್ಚೆಗೆ ವಿರೋಧ ಮಾಡಲಿಲ್ಲ, ಗುರುವಾರ ಮಧ್ಯಾಹ್ನದವರೆಗೂ ಚರ್ಚೆ ಮಾಡಿದರು. ಒಟ್ಟು 7 ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದರು ಎಂದು ತಿಳಿಸಿದರು.

ಯಾವುದೇ ತುರ್ತು ವಿಚಾರವನ್ನು ಪ್ರಸ್ತಾಪ ಮಾಡಿದಾಗ ವಿಪಕ್ಷದವರಿಗೆ ಅವಕಾಶ ಇದೆ, ಅಷ್ಟೇ ಸರ್ಕಾರಕ್ಕೂ ತನ್ನ ನಿಲುವು ಹೇಳುವ ಹಕ್ಕಿದೆ. ನಾಗೇಂದ್ರ ರಾಜೀನಾಮೆ ಕೊಟ್ಟಮೇಲೆ ನಾನೆ ಆ ಇಲಾಖೆ ಖಾತೆ ಇಟ್ಟುಕೊಂಡಿದ್ದೇನೆ. ನಾವು ಅಕ್ರಮ ಆಗಿಲ್ಲ ಅಂತ ಹೇಳ್ತಿಲ್ಲ, ಅಕ್ರಮ ಆಗಿದೆ ಅಂತಲೇ ಹೇಳಿದ್ದೇವೆ. ಅಕ್ರಮ ಯಾರು ಮಾಡಿದ್ದಾರೆ, ಇದಕ್ಕೆ ಯಾರು ಜವಾಬ್ದಾರಿ ಇದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಸಂತನಗರ ಬ್ಯಾಂಕ್‌ನಲ್ಲಿ ಹಣ ಇಡಲಾಗಿತ್ತು. ಇಲಾಖೆಯ ಎಂಡಿಗೆ ಹಣ ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಮಿನಿಸ್ಟರ್ ಪಾಲಿಸಿ ಮೇಕರ್ ಅಷ್ಟೇ, ಎಂಡಿ ಎಕ್ಸಿಕ್ಯೂಟಿವ್ ಹೆಡ್ ಆಗಿರುತ್ತಾರೆ. ಇಲಾಖೆ ಅಧ್ಯಕ್ಷರು ಇದಕ್ಕೆ ಜವಾಬ್ದಾರರಲ್ಲ ಎಂದು ಹೇಳಿದರು.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ವಸಂತನಗರ ಬ್ರಾಂಚ್ ಮ್ಯಾನೇಜರ್ ಶೋಭನಾ, ಎಂಜಿ ರೋಡ್‌ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಹಣ ವರ್ಗಾವಣೆ ಮಾಡಿದ್ದರು. ಬೇರೆ ಬೇರೆ ಕಡೆಯಿಂದ ಒಟ್ಟು 187 ಕೋಟಿ 33 ಲಕ್ಷ ಹಣ ವರ್ಗಾವಣೆ ಆಗಿದೆ. ಚೀಫ್‌ ಮ್ಯಾನೇಜರ್ ಸುಚಿಶ್ಮಿತಾ ರಾವ್, ಡೆಪ್ಯುಟಿ ಮ್ಯಾನೇಜರ್ ದೀಪಾ, ಕೃಷ್ಣ ಮೂರ್ತಿ ಕ್ರೆಡಿಟ್ ಆಫೀಸರ್ ಬ್ಯಾಂಕ್ ಉಸ್ತುವಾರಿ ಹೊತ್ತಿದ್ದಾರೆ. 187.33 ಕೋಟಿಯಲ್ಲಿ 89.63 ಕೋಟಿ ತೆಲಂಗಾಣದ ಹೈದರಾಬಾದ್ ಬ್ಯಾಂಕ್‌ಗೆ ಹೋಗಿದೆ ಎಂದು ತಿಳಿಸಿದರು.

ಒಟ್ಟು 217 ಅಕೌಂಟ್‌ಗೆ ಹಣ ಹೋಗಿದೆ. ರತ್ನಾಕರ ಕೋ ಆಪರೇಟಿವ್ ಲಿಮಿಟೆಡ್‌ಗೆ ಹೋಗಿದೆ 89 ಕೋಟಿ ಹೋಗಿದೆ. ಆ 3 ಜನ ಬ್ಯಾಂಕ್ ಅಧಿಕಾರಿಗಳು ಕೇಳಬೇಕಲ್ಲವೇ ಎಂದು ಪ್ರಶ್ನಿಸಿದರು.

ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಡೆತ್ ನೋಟ್‌ನಲ್ಲಿ ಹೇಳಿದ್ದಾರೆ. ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ, ಚೀಪ್ ಅಕೌಂಟ್ ಅಫೀಸರ್ ಪರಶುರಾಮ, ಎಂಜಿ ರಸ್ತೆ ಯೂನಿಯನ್‌ ಬ್ಯಾಂಕ್‌ ಚೀಫ್‌ ಮ್ಯಾನೇಜರ್ ಸುಚಿಸ್ಮಿತಾ ಕಾರಣ ಅಂತ ಬರೆದಿದ್ದಾರೆ.

ಈ ಹಗರಣದಲ್ಲಿ ಎಸ್‌ಐಟಿ 12 ಮಂದಿಯನ್ನು ವಶಕ್ಕೆ ಪಡೆದು, ಈ ಪೈಕಿ 9 ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ, ಮೂವರು ಕಸ್ಟಡಿಯಲ್ಲಿ ಇದ್ದಾರೆ. ತನಿಖೆ ವೇಳೆ 85 ಕೋಟಿ ರೂ.ಗಳಲ್ಲಿ 34 ಕೋಟಿ ಕೋಟಿ ವಾಪಾಸ್ ಬಂದಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!