ಏ.16, 17 ರಂದು ವಿಜಯನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ

ಹೊಸ ದಿಗಂತ ವರದಿ, ವಿಜಯನಗರ:
ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ 4 ತಂಡಗಳನ್ನು ರಚಿಸಿದ್ದು, 4 ವಿಭಾಗವಾಗಿ ವಿಂಗಡಿಸಿಕೊಂಡು ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡಿದೆ ಎಂದು ಭಾಜಪಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಹೇಳಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏ.20 ರಂದು ಪ್ರವಾಸ ಕೊನೆಯಾಗಲಿದ್ದು, ಎಲ್ಲ ಕಡೆಗಳಲ್ಲೂ ಭಾಜಪಗೆ ಉತ್ತಮ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್ ‌ನವರು ಎಷ್ಟೇ ತಿಪ್ಪರಲಾಗ್ ಹಾಕಿದರೂ ಅಧಿಕಾರಕ್ಕೆ ಬರೋಲ್ಲ ಎಂದರು.
ಏ.16 ಹಾಗೂ 17ರಂದು ಎರಡು ದಿನಗಳ ಕಾಲ ವಿಜಯನಗರದಲ್ಲಿ ಭಾಜಪ ರಾಜ್ಯ ಕಾರ್ಯಕಾರಣಿ ನಡೆಯುತ್ತಿದ್ದು, ಮೊದಲ ದಿನ ಭಾಜಪ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ರಾಷ್ಟ್ರೀಯ ‌ಕಾರ್ಯಕಾರಣಿ ಸದಸ್ಯರು ಸೇರಿದಂತೆ ಜಿಲ್ಲಾ ಮಟ್ಟದ ಮೇಲ್ಪಟ್ಟು ಹೊಣೆ ಹೊಂದಿರುವ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ರಾಜ್ಯ ಕಾರ್ಯಕಾರಿಣಿ ಯಶಸ್ವಿಗೆ 30 ಸಮಿತಿಗಳನ್ನು ರಚಿಸಲಾಗಿದ್ದು, ಇದು ಯಶಸ್ವಿ ಜೊತೆಗೆ ಈ ಹಂತದಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ. ಕಾರ್ಯಕಾರಣಿ ಸಭೆಯಲ್ಲಿ ನಡೆಯುವ  ವಿವಿಧ ಗೋಷ್ಠಿಯಲ್ಲಿ ತರಬೇತಿ ಮಾರ್ಗದರ್ಶನ ಹಿಂದೆ, ಇಂದು ಮುಂದೆ ಎಂಬ ತತ್ವದಡಿ ಕಾರ್ಯಕರ್ತರನ್ನು ಸಿದ್ದಗೊಳಿಸಲಾಗುವುದು ಎಂದರು.
ವಿಜಯನಗರ ನೂತನ ಜಿಲ್ಲೆಯಾದ ಬಳಿಕ ಹೊಸಪೇಟೆ ನಗರದಲ್ಲಿ ಭಾಜಪ ರಾಜ್ಯ ಕಾರ್ಯಕಾರಣಿ ಸಭೆ ನಡೆಯುತ್ತಿದ್ದು, ಈ ಒಂದು ಸಭೆ ಸ್ಥಳೀಯವಾಗಿಯೂ ಲಾಭ ಪಡೆಯುವ ಉದ್ದೇಶದಿಂದ ಬೂಥ್ ಮಟ್ಟದ ಮೇಲ್ಪಟ್ಟು ಎಲ್ಲ ಕಾರ್ಯಕರ್ತರು ಒಳಗೊಂಡ ಕಾರ್ಯಕ್ರಮ ಸಹ ಆಯೋಜಸಿಲಾಗಿದೆ. ಮುಂಬರುವ ಚುನಾವಣೆ ಪೂರ್ವ ಸಿದ್ಧತಾ ಸಭೆಯಾಗಿ ರೂಪಿಸಲಾಗುವುದು. ಕಾರ್ಯಕಾರಣಿ ಸಭೆಯ ಮುಖ್ಯ ವೇದಿಕೆಯನ್ನು ಹಂಪಿಯ ವಿಜಯನಗರದ ಘತವೈಭವ ಸಾರುವಂತೆ ರಚಿಸಲಾಗುವುದು ಎಂದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಮೊದಲ ಬಾರಿಗೆ ತವರು ಕ್ಷೇತ್ರದಲ್ಲಿ, ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದ ಪುಣ್ಯ ಭೂಮಿಯಲ್ಲಿ ಭಾಜಪ ರಾಜ್ಯ ಕಾರ್ಯಕಾರಣಿ ಸಭೆ ನಡೆಯುತ್ತಿದ್ದು, ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲು ಸಿದ್ದತೆ ಬಹುತೇಕ ಪೂರ್ಣಗೊಂಡಿದೆ.
ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಅರ್ಥಪೂರ್ಣ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ಸಿದ್ಧತೆಯನ್ನು ಮಾಡಲಾಗಿದೆ. ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಭಾಜಪ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಜೀ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯ ಭಾಜಪ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೀ, ಮಾಜಿ ಸಿಂ.ಬಿ.ಎಸ್.ಯಡಿಯೂರಪ್ಪ ಜೀ, ಸೇರಿದಂತೆ ಸಚಿವ ಸಂಪುಟದ ಎಲ್ಲ ಸಚಿವರು, ಶಾಸಕರು, ಸಂಸದರು ಸೇರಿದಂತೆ ಪಕ್ಷದ ಎಲ್ಲ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ  ಮಾತನಾಡಿ, ವಿಜಯನಗರದಲ್ಲಿ ನಡೆಯುವ ಭಾಜಪ ರಾಜ್ಯ ಕಾರ್ಯಕಾರಣಿ ವಿಜಯನಗರ ಹಾಗೂ ಮುಂದಿನ ಚುನಾವಣೆಯ ದಿಕ್ಸೂಚಿಯಾಗಲಿದೆ. ಕಾರ್ಯಕರ್ತರಿಗೆ ನಾಯಕತ್ವ, ಜನಪರ ಯೋಜನೆಯನ್ನು ಅರಿಯಲು ಸಹ ಈ ಸಭೆ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಭಾಜಪಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ಸಿದ್ದೇಶ್ ಯಾದವ್, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಮಾಧ್ಯಮ ವಕ್ತಾರ ಅನಂತ ಪದ್ಮನಾಭ್, ಸತ್ಯನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!