ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಜ. 22 ರ ರಾಮಲಲಾನ ಪ್ರತಿಷ್ಠಾಪನೆಮುಗಿದ ನಂತರ ಪೋಷಕರೊಂದಿಗೆ ಅಯೋಧ್ಯೆಗೆ ಭೇಟಿ ನೀಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಅದ್ದೂರಿ ಸಮಾರಂಭಕ್ಕೆ ತಮಗೆ ಆಹ್ವಾನವಿಲ್ಲದ ಕಾರಣ ತಾವು ಅಂದು ಹೋಗುವುದಿಲ್ಲ, ಆದರೆ ಈ ಅದ್ದೂರಿ ಕಾರ್ಯಕ್ರಮ ಮುಗಿದ ನಂತರ ತಾವು ತಮ್ಮ ಪತ್ನಿ, ಮಕ್ಕಳು ಹಾಗೂ ಪೋಷಕರೊಂದಿಗೆ ರಾಮನ ದರ್ಶನ ಪಡೆಯುವುದಾಗಿ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಪ್ರತಿಪಕ್ಷದ ಇಂಡಿಯಾ ಕೂಟದಲ್ಲಿ ಇದ್ದು, ಈ ಕೂಟದ ಬಹುತೇಕ ನಾಯಕರು ತಾವು ಅಯೋಧ್ಯೆಯ ರಾಮ ಮಂದಿರದ ಸಮಾರಂಭಕ್ಕೆ ಹೋಗುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಈ ವಿಚಾರವಾಗಿ ಇಷ್ಟು ದಿನ ಮೌನವಾಗಿದ್ದ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಸಮಾರಂಭ ಮುಗಿದ ಮೇಲೆ ಅಯೋಧ್ಯೆಗೆ ಭೇಟಿ ಕೊಡುವುದಾಗಿ ಹೇಳಿದ್ದಾರೆ.
ಅಯೋಧ್ಯೆಯ ಕಾರ್ಯಕ್ರಮಕ್ಕೆ ಔಪಚಾರಿಕ ಆಹ್ವಾನವು ಬರುತ್ತಿರುವ ಕಾರಣ ಈ ಕಾರ್ಯಕ್ರಮದಂದು ತಮ್ಮ ದಿನಾಂಕವನ್ನು ಬೇರೆ ಕಾರ್ಯಕ್ರಮಗಳಿಗೆ ಮೀಸಲಿಡದೇ ಫಿಕ್ಸ್ ಮಾಡುವಂತೆ ಒತ್ತಾಯಿಸಿ ಕೇಜ್ರಿವಾಲ್ ಅವರಿಗೆ ಕಳೆದ ವಾರ ಪತ್ರ ಬಂದಿತ್ತು. ಜನವರಿ 22 ರಂದು ನನ್ನ ವೇಳಾಪಟ್ಟಿಯನ್ನು ಮುಕ್ತವಾಗಿಡಲು ನನ್ನನ್ನು ಕೇಳಲಾಯಿತು, ಆದರೆ ಇನ್ನೂ ಯಾವುದೇ ಆಹ್ವಾನ ಬಂದಿಲ್ಲ, ಭದ್ರತೆ ಮತ್ತು ವಿಐಪಿ ದೃಷ್ಟಿಯಿಂದ ಒಬ್ಬರೇ ಬರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಕೇಜ್ರಿವಾಲ್ ಅವರು ಇಂದು ಹೇಳಿದ್ದಾರೆ.
ತಮ್ಮ ಪೋಷಕರು ಅಯೋಧ್ಯೆಗೆ ಹೋಗಲು ಕಾತುರರಾಗಿದ್ದಾರೆ. ಈ ಪವಿತ್ರ ಅದ್ದೂರಿ ಸಮಾರಂಭ ಮುಗಿದ ನಂತರ ನಾವು ಅಲ್ಲಿಗೆ ನಮ್ಮ ಇಡೀ ಕುಟುಂಬದೊಂದಿಗೆ ಭೇಟಿ ನೀಡುತ್ತೇವೆ. ಆಹ್ವಾನ ಪತ್ರವಿಲ್ಲದಿದ್ದರೂ ನಾನು ಅಯೋಧ್ಯೆಗೆ ಜನವರಿ 22 ರ ಬಳಿಕ ಪತ್ನಿ, ಮಕ್ಕಳು ಪೋಷಕರೊಂದಿಗೆ ಭೇಟಿ ನೀಡುವೆ ಎಂದು ಹೇಳಿದ್ದಾರೆ.